ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೊಮ್ಮೆ ವಿಷಮಯವಾಗಿದೆ. ಶನಿವಾರ ಹಲವು ಸ್ಥಳಗಳಲ್ಲಿ ಎಕ್ಯೂಐ 400 ದಾಟಿದ್ದು, ಭಾನುವಾರ 447ಕ್ಕೆ ಏರಿದೆ. ದಟ್ಟವಾದ ಮಂಜು ಕವಿದಿರುವುದರ ಜತೆಗೆ ವಾಹನಗಳು, ಕಾರ್ಖಾನೆಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್, ಕ್ರಷರ್ ಮತ್ತು ನಿರ್ಮಾಣಹಂತದ ಕಾಮಗಾರಿಗಳಿಂದ ಹೊರಬರುವ ಧೂಳಿನಿಂದ ವಾಯು ಮಾಲಿನ್ಯ ಹೆಚ್ಚಾಗಿದ್ದು, ಜನ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ಜನಪ್ರಿಯ ತಮಿಳು ಹಾಸ್ಯನಟ ಬೋಂಡಾ ಮಣಿ ಮೃತ್ಯು
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಶನಿವಾರ ಕನಿಷ್ಠ 9.6 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಲಾಗಿದೆ, ಹಗಲಿನಲ್ಲಿ ಗರಿಷ್ಠ ತಾಪಮಾನವು 24.4 ಡಿಗ್ರಿ ಸೆಲ್ಸಿಯಸ್ ಇದ್ದು, ಭಾನುವಾರದಂದು ದಟ್ಟವಾದ ಮಂಜಿನಿಂದ ಆವೃತವಾಗಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಮತ್ತು 7 ಡಿಗ್ರಿ ಸೆಲ್ಸಿಯಸ್ ಇದೆ.
ಏತನ್ಮಧ್ಯೆ, ದಟ್ಟವಾದ ಮಂಜು ಮತ್ತು ಹೊಗೆಯಿಂದ ವಿಮಾನಯಾನದ ಮೇಲೆ ಪರಿಣಾಮ ಬೀರಿದೆ, ವಿಮಾನ ನಿಲ್ದಾಣ ಮಂಜಿನಿಂದ ಆವೃತವಾಗಿದ್ದು, ವಿಮಾನಗಳ ಸಂಚಾರದ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಶನಿವಾರ 11 ಅಂತರರಾಷ್ಟ್ರೀಯ ಮತ್ತು ಐದು ದೇಶೀಯ ವಿಮಾನಗಳು ವಿಳಂಬವಾಗಿ ಸಂಚರಿಸಿವೆ.
ಇನ್ನು ಅನಿವಾರ್ಯವಲ್ಲದ ನಿರ್ಮಾಣ, ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆಯನ್ನು ನಿಷೇಧಿಸಲು ಸರ್ಕಾರ ಆದೇಶಿಸಿದೆ. ಡೀಸೆಲ್ ನಾಲ್ಕು-ಚಕ್ರ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಲಾಗಿದೆ.
ಸಿಬಿಸಿಪಿ ಅಂಕಿಅಂಶಗಳ ಪ್ರಕಾರ ಶನಿವಾರ ಆನಂದ್ ವಿಹಾರ್ 479, ಅಶೋಕ್ ವಿಹಾರ್ 454 ಮತ್ತು ದ್ವಾರಕಾ-ಸೆಕ್ಟರ್ 8 452. ಐಜಿಐ ವಿಮಾನ ನಿಲ್ದಾಣ ಸೇರಿ ಇತರ ಪ್ರದೇಶಗಳಲ್ಲಿ 412, ಐಟಿಒದಲ್ಲಿ 476, ಜಹಾಂಗೀರ್ ಪುರಿ 475, ನರೇಲಾ 460, ಆರ್ಕೆ ಪುರಂ 470, ರೋಹಿಣಿ 475, ಶಾದಿಪುರ ಮತ್ತಿತರ ಪ್ರದೇಶಗಳಲ್ಲಿ 481, ವಜೀರ್ಪುರದಲ್ಲಿ 483 ಎಕ್ಯೂಐ ದಾಖಲಾಗಿತ್ತು.
ಆರೋಗ್ಯದ ದೃಷ್ಟಿಯಿಂದ, 0 ರಿಂದ 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ಉತ್ತಮ’, 51 ರಿಂದ 100 ರ ನಡುವೆ ‘ತೃಪ್ತಿದಾಯಕ’ ವಾಗಿರುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ಕಾರಣ ಸರ್ಕಾರವು ಶಾಲೆಗಳಿಗೆ ಜನವರಿ 1 ರಿಂದ ಜನವರಿ 6ರವರೆಗೆ ರಜೆ ಘೋಷಿಸುವ ಸಾಧ್ಯತೆಯಿದೆ.
ಸಂಸತ್ ಅಧಿವೇಶನದ ವೇಳೆ ಭದ್ರತಾ ಲೋಪ; ಕೊನೆಗೂ ಮೌನ ಮುರಿದ ಸಂಸದ ಪ್ರತಾಪ್ ಸಿಂಹ