ನವದೆಹಲಿ: ದೆಹಲಿ ಹಿಂಸಾಚಾರ ಹಾಗೂ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯಲ್ಲಿ ತನ್ನ ಹೆಸರು ಕೇಳಿಬರುತ್ತಲೇ ಪರಾರಿಯಾಗಿದ್ದ ಆಪ್ ಉಚ್ಚಾಟಿತ ಕೌನ್ಸಿಲರ್ ತಾಹೀರ್ ಹುಸೇನ್ ಇಂದು ಕೋರ್ಟ್ಗೆ ಆಗಮಿಸಿದ್ದ.
ತಾನು ದೆಹಲಿ ನ್ಯಾಯಾಲಯದ ಎದುರು ಶರಣಾಗುವುದಾಗಿ ತಿಳಿಸಿ, ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದ್ದರಿಂದ ದೆಹಲಿ ಪೊಲೀಸರು ತಾಹೀರ್ನನ್ನು ಬಂಧಿಸಿದ್ದಾರೆ.
ಈಶಾನ್ಯ ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ತಾಹೀರ್ ಹುಸೇನ್ ಮನೆಯ ಟೆರೇಸ್ ಮೇಲೆ ಪೆಟ್ರೋಲ್ ಬಾಂಗ್ಗಳು, ಕಲ್ಲು, ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. ದೆಹಲಿ ಹಿಂಸಾಚಾರದಲ್ಲಿ ಆತನ ಕೈವಾಡವಿದೆ ಎಂದು ಬಲವಾದ ಆರೋಪ ಕೇಳಿಬಂದಿತ್ತು. ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಗೆ ತಾಹೀರ್ ಕಾರಣ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ ತಾಹೀರ್ ನಾಪತ್ತೆಯಾಗಿದ್ದ.
ತಾನು ಶರಣಾಗುತ್ತೇನೆ ಎಂದು ಹೇಳಿ ದೆಹಲಿ ಕೋರ್ಟ್ ಬಳಿ ಬಂದಿದ್ದ. ಆದರೆ ಆತನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಇದು ತಮ್ಮ ನ್ಯಾಯ ನಿರ್ಣಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರಿಂದ ತಾಹೀರ್ನನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. (ಏಜೆನ್ಸೀಸ್)