ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಸಾಧಿಸಿ ಮೂರನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದೀಗ ದೆಹಲಿ ಫಲಿತಾಂಶ ಇದೇ ವರ್ಷ ಎದುರಾಗಲಿರುವ ಬಿಹಾರದ ವಿಧಾನಸಭೆ ಚುನಾವಣೆ ಮೇಲೆ ಬೀಳಲಿದೆಯೇ ಎಂಬ ಸಣ್ಣ ನಡುಕ ಸಿಎಂ ನಿತೀಶ್ ಕುಮಾರ್ಗೆ ಶುರುವಾಗಿದೆ. ಇಂದು ದೆಹಲಿ ಫಲಿತಾಂಶದ ನಡುವೆ ಪ್ರತಿಕ್ರಿಯಿಸಿ ಕೇವಲ ಮೂರೇ ಪದವನ್ನು ಹೇಳಿ ತಲೆಯ ಮೇಲೆ ಕೈಯಿಟ್ಟು ಹೊರ ನಡೆದಿದ್ದು ಕುತೂಹಲ ಮೂಡಿಸಿದೆ.
ಬಿಜೆಪಿ ಐಕಾನ್ ದೀನ ದಯಾಳ ಉಪಾಧ್ಯಾಯ ಅವರ ಸಂಸ್ಮರಣಾ ದಿನ ಹಿನ್ನೆಲೆಯಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರೊಂದಿಗೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದ ಬಳಿಕ ದೆಹಲಿ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರ ಪ್ರಶ್ನೆಗೆ, ಜನತಾ ಮಾಲೀಕ್ ಹೈ (ಜನರೇ ಮಾಲೀಕರು ) ಎಂಬ ಮೂರು ಪದವನ್ನಷ್ಟೇ ಹೇಳಿ ತಲೆ ಮೇಲೆ ಕೈಯಿಟ್ಟುಕೊಂಡು ಅಲ್ಲಿಂದ ಹೊರ ನಡೆದರು.
ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅಂತಹ ನಾಯಕರೇ ಪ್ರಚಾರ ನಡೆಸಿದರು ಹೀನಾಯ ಸೋಲು ಅನುಭವಿಸಿರುವುದು ನಿತೀಶ್ ಅವರಿಗೆ ಕೊಂಚ ನಡುಕ ಶುರುವಾಗಿದೆ ಎನ್ನಲಾಗಿದೆ.
ಬಿಜೆಪಿ ಮೈತ್ರಿಯೊಂದಿಗೆ ಸಂಯುಕ್ತ ಜನತಾದಳ(ಜೆಡಿಯು) ಕೂಡ ದೆಹಲಿಯ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ನಿತೀಶ್ ಮೂರು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಿದ್ದರು. ಆದರೆ, ಸ್ಪರ್ಧಿಸಿದ್ದ ಎರಡು ಕ್ಷೇತ್ರದಲ್ಲೂ ಜೆಡಿಯು ಭಾರಿ ಅಂತರದಿಂದ ಹೀನಾಯ ಸೋಲು ಕಂಡಿದೆ. ಅಲ್ಲದೆ, ಕೇಜ್ರಿವಾಲ್ ಹಣಿಯಲು ಇದೇ ಮೊದಲ ಬಾರಿಗೆ ಜೆಡಿಯುಯೊಂದಿಗೆ ಬಿಜೆಪಿ ಸೇರಿಕೊಂಡಿತ್ತು. ಸಮಾವೇಶವೊಂದರಲ್ಲಿ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ನಿತೀಶ್, ದೆಹಲಿಯಲ್ಲಿ ಕೇವಲ ಉಚಿತ ಸೌಲಭ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ. ಆದರೆ, ಯಾವುದೇ ನಿಜವಾದ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದರು.
ಜೆಡಿಯು ಉಪಾಧ್ಯಕ್ಷರಾಗಿದ್ದ ಹಾಗೂ ಚುನಾವಣಾ ಚಾಣಕ್ಯ ಎಂದೇ ಪ್ರಖ್ಯಾತಿಯಾಗಿದ್ದ ಪ್ರಶಾಂತ್ ಕಿಶೋರ್ ಕೇಜ್ರಿವಾಲ್ಗೆ ಸಾಥ್ ನೀಡಿದ್ದಾರೆ. ವಿಪರ್ಯಾಸವೆಂದರೆ ಬಿಜೆಪಿಯೊಂದಿಗಿನ ಸಖ್ಯ ಹಾಗೂ ಸಿಎಎ ಕಾಯ್ದೆಯಲ್ಲಿ ವಿಭಿನ್ನ ನಿಲುವಿನಿಂದಾಗಿ ನಿತೀಶ್ ಕುಮಾರ್ ಜೆಡಿಯು ಉಪಾಧ್ಯಕ್ಷ ಸ್ಥಾನದಿಂದ ಪ್ರಶಾಂತ್ ಕಿಶೋರ್ ಅವರನ್ನು ಕಿತ್ತುಹಾಕಿದ್ದರು. ಇದೀಗ ದೆಹಲಿಯ ಚುನಾವಣೆಯಲ್ಲೂ ಪ್ರಶಾಂತ್ ಕಿಶೋರ್ ಕಮಾಲ್ ಮಾಡಿರುವುದು ನಿತೀಶ್ಗೆ ಸ್ವಲ್ಪ ಚಿಂತಿಸುವಂತೆ ಮಾಡಿದೆ.
ಫೆ. 8ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಪ್ರಕಟವಾದ ಫಲಿತಾಂಶದಲ್ಲಿ ಆಪ್ 62 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಿದೆ. ಬಿಜೆಪಿ 8 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದು, ಕಾಂಗ್ರೆಸ್ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ. (ಏಜೆನ್ಸೀಸ್)