ನವದೆಹಲಿ: ಸುಲಿಗೆ ಪ್ರಕರಣದ ಆರೋಪಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಕುಟುಂಬದಿಂದ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದ್ದು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸ್ ಠಾಣೆಯೊಳಗೆ ರಕ್ಷಿಸಲಾಗಿದೆ.
ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ನಿಂದ ಈ ಕೃತ್ಯ ನಡೆದಿದೆ. ಮೇ 25ರಂದು ದೆಹಲಿಯ ಸನ್ಲೈಟ್ ಕಾಲನಿಯ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ತೆರಳಿ ತನ್ನ ಸಹೋದರ ಕಿಡ್ನ್ಯಾಪ್ ಆಗಿರುವ ಬಗ್ಗೆ ಮತ್ತು ಬಿಡುಗಡೆಗೆ ಮೂರು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ನೀಡುತ್ತಾಳೆ.
ಇದಾದ ಬಳಿಕ ಫೋನ್ ಕರೆ ಮಾಡುವ ಆಕೆ ನಾನೀಗ ಒಂದು ಲಕ್ಷ ರೂ. ಹಣವನ್ನು ಹಿಡಿದುಕೊಂಡು ಸಾರಾಯಿ ಕಲೆ ಬಸ್ ನಿಲ್ದಾಣದ ಬಳಿ ನಿಂತಿದ್ದೇನೆ. ಆದರೆ, ಅವರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಹೇಳುತ್ತಾಳೆ.
ಕರೆಯನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು ತಕ್ಷಣ ಸನ್ಲೈಟ್ ಕಾಲನಿಗೆ ತಲುಪುತ್ತಾರೆ. ಕರೆ ಮಾಡಿದ ಭಾರತಿ ಎಂಬಾಕೆ ಅಧಿಕಾರಿಗಳಿಗೆ ಎದುರಾಗುತ್ತಾಳೆ. ಈ ವೇಳೆ ತನ್ನ ಸಹೋದರ ಜವಹರ ಪಾರ್ಕ್ ನಿವಾಸಿ ಆಗಿರುವ ವರುಣ್ನನ್ನು ಕೆಲವು ಅಪರಿಚಿತ ವ್ಯಕ್ತಿಗಳು ಕಿಡ್ನ್ಯಾಪ್ ಮಾಡಿದ್ದಾರೆಂದು ಹೇಳುತ್ತಾಳೆ. ಅಪಹರಣಕಾರರು ಸಹೋದರನ ಮೊಬೈಲ್ನಿಂದ ವಾಟ್ಸ್ಆ್ಯಪ್ ಕಾಲ್ ಮೂಲಕ ಕರೆ ಮಾಡಿದ್ದಾಗಿ ಹೇಳುತ್ತಾಳೆ.
ಸರಾಯಿ ಕಲೆ ಖಾನ್ ಸ್ಥಳಕ್ಕೆ 3 ಲಕ್ಷ ರೂ. ಹಣವನ್ನು ತರುವಂತೆ ಅಪಹರಣಕಾರರು ಒತ್ತಾಯಿಸಿರುತ್ತಾರೆ. ಅಲ್ಲದೆ, ಬೇರೊಂದು ಮೊಬೈಲ್ ನಂಬರ್ನಿಂದಲೂ ಅಪಹರಣಕಾರರು ಕರೆ ಮಾಡಿರುತ್ತಾರೆ. ತನಿಖೆ ನಡೆಸಿದ ಅಧಿಕಾರಿಗಳು ಪ್ರಕರಣ ಸಂಬಂಧ ಹೆಡ್ ಕಾನ್ಸ್ಟೇಬಲ್ ಮತ್ತು ಆತನ ಜತೆಗಾರರನ್ನು ಬಂಧಿಸುತ್ತಾರೆ.
ವಿಚಾರಣೆ ವೇಳೆ ಆರೋಪಿ ಹೆಡ್ ಕಾನ್ಸ್ಟೇಬಲ್ ರಾಕೇಶ್ ಕುಮಾರ್ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ. ಮಾಹಿತಿದಾರ ಅಮೀರ್ ಖಾನ್, ರಾಕೇಶ್ಗೆ ಒಮ್ಮೆ ಕರೆ ಮಾಡಿ ಆತನ ಸ್ನೇಹಿತನ ಗ್ಯಾಂಗ್ ಒಂದು ಗಾಂಧಿನಗರದ ನಿವಾಸಿಯೊಬ್ಬರ ಮನೆಯಲ್ಲಿ ಸುಲಿಗೆ ಮಾಡಿರುವುದಾಗಿ ತಿಳಿಸುತ್ತಾನೆ. ಗ್ಯಾಂಗ್ ಸದಸ್ಯರಲ್ಲಿ ಒಬ್ಬನಾದ ವರುಣ್ ತನ್ನ ಪಾಲಿನ ಸುಮಾರು 1.5 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಳುತ್ತಾನೆ.
ವರಣ್ನನ್ನು ಬಂಧಿಸಿದರೆ ದರೋಡೆ ಹಣವನ್ನು ವಶಕ್ಕೆ ಪಡೆಯಬಹುದೆಂಬ ದುರಾಸೆಗೆ ರಾಕೇಶ್ ಬೀಳುತ್ತಾನೆ. ಈಗಾಗಲೇ ದರೋಡೆ ಸಂಬಂಧ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಇದೇ ನೆಪ ಇಟ್ಟುಕೊಂಡು ಆತನನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ.
ಸದ್ಯ ರಾಕೇಶ್ನನ್ನು ಬಂಧಿಸಲಾಗಿದ್ದು, ವರುಣ್ನನ್ನು ರಕ್ಷಿಸಿ ಜಾಮಿಯಾ ನಗರ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ವರುಣ್ನನ್ನು ಸಹ ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತನ ಮನೆಯಲ್ಲಿ ಸುಲಿಗೆ ಮಾಡಿದ್ದ 1 ಲಕ್ಷ ರೂ. ಹಣವನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. (ಏಜೆನ್ಸೀಸ್)
ಹೀಗೂ ಇರ್ತಾರೆ! ತಲೆಬುರುಡೆ ಓಪನ್ ಮಾಡಿ ಕತ್ತರಿ ಹಾಕಿದರೂ ಜೋಕ್ ಮಾಡುತ್ತಿದ್ದ ರೋಗಿ…
ಉಸಿರಾಟದ ಸಮಸ್ಯೆ ಇದ್ದರೂ ರಜೆ ಕೊಟ್ಟಿಲ್ಲವೆಂದು ಆಕ್ಸಿಜನ್ ಸಿಲಿಂಡರ್ ಸಹಿತ ಬ್ಯಾಂಕ್ಗೆ ಬಂದ ಉದ್ಯೋಗಿ!