ನವದೆಹಲಿ : ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿರುವ 9 ವರ್ಷದ ದಲಿತ ಬಾಲಕಿಯ ಆರೋಪಿತ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಮ್ಯಾಜಿಸ್ಟ್ರೇಟರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮೃತ ಬಾಲಕಿಯ ಕುಟುಂಬವನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದ ಕೇಜ್ರಿವಾಲ್, 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
ದೆಹಲಿಯ ತನ್ನ ಮನೆಯ ಬಳಿಯ ಕ್ರೆಮೇಷನ್ ಗ್ರೌಂಡ್ಗೆ ವಾಟರ್ ಕೂಲರ್ನಿಂದ ನೀರು ಪಡೆಯಲು ಹೋಗಿದ್ದಾಗ ಬಾಲಕಿಯ ಮೇಲೆ ಪೂಜಾರಿ ಮತ್ತು ಇತರ ಮೂವರು ಅತ್ಯಾಚಾರ ಮಾಡಿ ಕೊಲೆ ಎಸಗಿದ್ದಾರೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ. ಬಾಲಕಿಯು ಕರೆಂಟ್ ಹೊಡೆದು ಸತ್ತಿದ್ದಾಳೆಂದು ಹೇಳಿ, ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಸಿ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸಂಸತ್ ಬಿಕ್ಕಟ್ಟಿಗೆ ಸರ್ಕಾರದ ಸೊಕ್ಕಿನ ವರ್ತನೆ ಕಾರಣ: ವಿಪಕ್ಷ ನಾಯಕರು
ತಾಯಿಯ ಕೂಗನ್ನು ಆಲಿಸಿ, ಬಲವಂತದ ಅಂತ್ಯ ಸಂಸ್ಕಾರವನ್ನು ಸ್ಥಳೀಯರು ತಡೆದಿದ್ದು, ನಂತರ ಬಾಲಕಿಯ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿತ್ತು. ಆದರೆ ಈವರೆಗೆ ಯಾವುದೇ ನಿರ್ಣಾಯಕ ಮಾಹಿತಿಯನ್ನು ವೈದ್ಯರು ನೀಡಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)