ಶಿವಮೊಗ್ಗ: ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಎಲ್ಲ ಅಧಿಕಾರ ನೀಡಿದೆ. ಎರಡು ಬಾರಿ ಪ್ರತಿಪಕ್ಷ ಸ್ಥಾನ, ಒಮ್ಮೆ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನೂ ನೀಡಿದೆ. ಆದರೂ ಪಕ್ಷದ ನಾಯಕರ ಮೇಲೆ ಅವರಿಗೆ ವಿಶ್ವಾಸವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಅವರ ಹತಾಶೆಯ ಮನೋಭಾವ ತೋರಿಸುತ್ತದೆ. ತಮ್ಮ ಸೋಲಿನ ಬಗ್ಗೆ ನೋವು ಹೊರಹಾಕುತ್ತಿರುವ ಅವರಿಗೆ ತಮ್ಮದೇ ಪಕ್ಷದ ಶಾಸಕರು ಮತ್ತು ಸಂಸದರು ಸೋತರೂ, ಪಕ್ಷ ಅಧಿಕಾರ ಕಳೆದುಕೊಂಡರೂ ಏಕೆ ನೋವಾಗಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಜೆಡಿಎಸ್ನಿಂದ ಬಂದ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಸೇರಿ ಎಲ್ಲವನ್ನೂ ಪಡೆದರು. ಇದೀಗ ತಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ಅವರು ಸೋಲಿಸಿದ್ದು ಯಾರೆಂದು ನೇರವಾಗಿ ಹೇಳಲಿ. ಜತೆಗೆ ಕಾಂಗ್ರೆಸ್ನಲ್ಲಿ ಸದ್ಯದ ಅವರ ಪರಿಸ್ಥಿತಿ ನೋಡಿದರೆ ಅವರೇ ಪಕ್ಷ ಬಿಟ್ಟುಹೋಗಲಿದ್ದಾರೆ ಅಥವಾ ಬೇರೆ ಪಕ್ಷ ಕಟ್ಟುವ ಆಲೋಚನೆಯಲ್ಲಿರಬಹುದು ಎಂದರು.
ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಿರ್ನಾಮವಾಗಿದೆ. ಪಕ್ಷದಲ್ಲಿ ನಾನೇ ಎಲ್ಲ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 5 ವರ್ಷ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಜನರೇಕೆ ಅವರನ್ನು ಸೋಲಿಸುತ್ತಿದ್ದರು. ತಮ್ಮ ಸೋಲಿಗೆ ಪಕ್ಷದ ಮುಖಂಡರನ್ನು ಹೊಣೆ ಮಾಡುತ್ತಿರುವ ಅವರನ್ನು ಕಾಂಗ್ರೆಸ್ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಉಪಾಧ್ಯಕ್ಷ ಮಧುಸೂದನ್, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜು, ಬಿ.ಕೆ.ಶ್ರೀನಾಥ್, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಎನ್.ಜೆ.ನಾಗರಾಜ್, ಭದ್ರಾವತಿ ಅಧ್ಯಕ್ಷ ಪ್ರಭಾಕರ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.