ನವದೆಹಲಿ: “ಕೆಂಪುಕೋಟೆಗೆ ಹೋಗಲು ನಾನು ಯಾರಿಗೂ ಹೇಳಿಲ್ಲ. ನೀವು ನನ್ನ ಎಲ್ಲಾ ವೀಡಿಯೋಗಳನ್ನು ನೋಡಿದ್ದೀರಿ. ಅದೇ ಬೇರೆಯವರು ಜನರಿಗೆ ಕೆಂಪುಕೋಟೆಗೆ ಬರಲು ಹೇಳಿರುವ ವೀಡಿಯೋಗಳಿವೆ. ಅವುಗಳನ್ನೂ ತನಿಖೆಯಲ್ಲಿ ಪರಿಗಣಿಸಬೇಕು. ನಾನೇ ಮುಖ್ಯ ಆರೋಪಿಯಲ್ಲ” ಎಂದಿದ್ದಾನೆ, ಕೆಂಪು ಕೋಟೆಯಲ್ಲಿ ಅನ್ಯ ಧ್ವಜ ಹಾರಿಸಿದ ಕೇಸಿನಲ್ಲಿ ಮುಖ್ಯ ಆರೋಪಿಯಾಗಿರುವ, ಪಂಜಾಬಿ ನಟ ದೀಪ್ ಸಿಧು.
ಈ ರೀತಿಯಾಗಿ ಹೇಳಿ ದೆಹಲಿಯ ಟಿಸ್ ಹಿಜಾರಿ ಕೋರ್ಟ್ಗೆ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಘಟನೆಯ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ದೀಪ್ ಸಿಧು, ತನ್ನ ಅಮಾಯಕತೆಯನ್ನು ಸಾಬೀತುಪಡಿಸುವ ಇತರ ವೀಡಿಯೋಗಳು ಮತ್ತು ಸಾಮಗ್ರಿಗಳಿವೆ ಎಂದಿದ್ದಾನೆ.
ಇದನ್ನೂ ಓದಿ: ದೀಪ್ ಸಿಧು ಫೇಸ್ಬುಕ್ ಖಾತೆ ನಡೆಸುತ್ತಿದ್ದಾಳೆ ಒಬ್ಬ ವಿದೇಶೀ ಸ್ನೇಹಿತೆ !
ಜನವರಿ 26 ರಂದು ತಾನು 12 ಗಂಟೆವರೆಗೆ ಮೂರ್ತಲ್ನ ಹೋಟೆಲ್ ಒಂದರಲ್ಲಿ ಇದ್ದ ಬಗ್ಗೆ ಸಿಸಿಟಿವಿ ಫೂಟೇಜ್ ಮತ್ತು ಹೋಟೆಲಿನ ರಸೀತಿಗಳಿವೆ. ತಾನು ಕೆಂಪು ಕೋಟೆಯನ್ನು ಮಧ್ಯಾಹ್ನ 2 ಗಂಟೆಗೆ ತಲುಪುವ ಮುಂಚೆಯೇ ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ತೊಡಗಿದ್ದರು ಎನ್ನುವುದನ್ನು ಅವು ಸಾಬೀತುಪಡಿಸುತ್ತವೆ. ಆದರೆ ಪೊಲೀಸರು ಅದನ್ನು ಪರಿಗಣಿಸುತ್ತಿಲ್ಲ ಎಂದು ಈ ಅರ್ಜಿಯಲ್ಲಿ ದೂರಲಾಗಿತ್ತು.
ದೆಹಲಿ ಪೊಲೀಸರ ಪರವಾಗಿ ಸರಕಾರಿ ವಕೀಲರು, ಆರೋಪಿಯು ತನಿಖೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ವಾದಿಸಿದರು. ಇಂದು ಈ ಅರ್ಜಿಯನ್ನು ಇತ್ಯರ್ಥಗೊಳಿಸಿದ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ್, ಸತ್ಯವನ್ನು ಬಹಿರಂಗಪಡಿಸಲು ದೀಪ್ ಸಿಧು ಉಲ್ಲೇಖಿಸಿರುವ ಅಂಶಗಳನ್ನು ಪರಿಗಣಿಸಲು ಪೊಲೀಸರಿಗೆ ನಿರ್ದೇಶಿಸಿದರು. ನ್ಯಾಯಯುತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸುವುದು ತನಿಖಾಧಿಕಾರಿಯ ಕರ್ತವ್ಯವಾಗಿದೆ ಎಂದು ತಾಕೀತು ಮಾಡಿದರು.
“ತನಿಖೆ ನಡೆಸುವ ಅಧಿಕಾರಿಗಳು ಆರೋಪಿಯ ತಪ್ಪನ್ನು ಸಾಬೀತುಪಡಿಸಲು ಮಾತ್ರ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿಲ್ಲ, ಬದಲಿಗೆ ಘಟನೆಯ ನಿಜವಾದ ಚಿತ್ರವನ್ನು ನ್ಯಾಯಾಲಯದ ಮುಂದೆ ತರಬೇಕು” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಜೊತೆಗೇ ಅಕಸ್ಮಾತ್ ಸುಳ್ಳು ಸಾಕ್ಷ್ಯಗಳನ್ನು ರೂಪಿಸುವ ಮೂಲಕ ಸಿಧು ತನಿಖೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದರೆ ಆ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ : ಬಂಗಾಳದಲ್ಲಿ ವೇತನ ಹೆಚ್ಚಳ, ತಮಿಳುನಾಡಿನಲ್ಲಿ ಸಾಲ ಮನ್ನಾ !