ಹಗರಿಬೊಮ್ಮನಹಳ್ಳಿ: ನಿರಂತರ ಮಳೆಯಿಂದ ತಾಲೂಕಿನ ಮಗಿಮಾವಿನಹಳ್ಳಿಯ ಶ್ರೀ ಉಡುಸಲಮ್ಮ ಕೆರೆ 11 ವರ್ಷಗಳ ಬಳಿಕ ಭರ್ತಿಯಾಗಿದ್ದು, ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.
ಗ್ರಾಮದಲ್ಲಿ ಎರಡು ಕೆರೆಗಳಿದ್ದು, ಉಡುಸಲಮ್ಮ ಕೆರೆ ದೊಡ್ಡದು. ಉಡುಸಲಮ್ಮ ಕೆರೆ 2 ಕಿಮೀ ವಿಸ್ತೀರ್ಣ ಹೊಂದಿದೆ. ಈ ಭಾಗದ 600 ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸಲಿದೆ. ಕಳೆದ 11 ವರ್ಷಗಳಿಂದ ಕೆರೆಗೆ ಇಷ್ಟೊಂದು ನೀರು ಹರಿದು ಬಂದಿರಲಿಲ್ಲ. ನೆರೆಹೊರೆಯ ಪೋತಲಗಟ್ಟಿ ಕೆರೆ, ಹುಲಿಕುಂಟಿ ಕೆರೆ, ಜಾಲಿಕುಂಟೆ ಕೆರೆ, ಜಂಬಯ್ಯನ ಕೆರೆ ತುಂಬಿದ ಹಿನ್ನೆಲೆಯಲ್ಲಿ ನಮ್ಮೂರ ಕೆರೆಗೆ ನೀರು ಹರಿದು ಬಂದಿದೆ. ಉಡುಸಲಮ್ಮ ಕೆರೆ ಕೋಡಿ ಹರಿದರೆ ಹಂಪಾಪಟ್ಟಣ ಕೆರೆಗೆ ನೀರು ಹರಿಯಲಿದೆ. ಅಲ್ಲಿಂದ ತುಂಗಭದ್ರಾ ನದಿಗೆ ನೀರು ಸೇರುತ್ತದೆ. ಮಗಿಮಾವಿನಹಳ್ಳಿ ಕೆರೆಗೆ ನೀರು ತುಂಬಿದರೆ ಗ್ರಾಮದೇವತೆ ಉಡುಸಲಮ್ಮ ದೇವಿಗೆ ಹಬ್ಬ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ವಿರೂಪಾಕ್ಷ ಕುಪ್ಪಿನಕೆರೆ, ವೀರೇಶಪ್ಪ, ಎಲಿಗಾರ ವೀರಣ್ಣ, ಕೃಷ್ಣಮೂರ್ತಿ, ಪಂಪಾಪತಿ ಕುಪ್ಪಿನಕೇರಿ ತಿಳಿಸಿದರು.