More

    ಸಿದ್ದರಾಮಯ್ಯ ಅವರಿಗೆ ಪೂರ್ಣಾವಧಿ ಅಧಿಕಾರ ಕೊಡಿ

    ದಾವಣಗೆರೆ: ಶೋಷಿತ ವರ್ಗಗಳ ನಾಯಕ ಸಿದ್ದರಾಮಯ್ಯ ಅವರಿಗೆ ಪೂರ್ಣಾವಧಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಕುರುಬ ಸಮುದಾಯಕ್ಕೆ ಮೂರು ಮಂತ್ರಿಗಿರಿ ಹಾಗೂ ಜಿಲ್ಲೆಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ದಾವಣಗೆರೆ ಜಿಲ್ಲಾ ಹಾಲುಮತ ಮಹಾಸಭಾ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದೆ.
    ರಾಜ್ಯದಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 2018ರಲ್ಲಿ ಆದ ತಪ್ಪು ಮತ್ತೊಮ್ಮೆ ಆಗಬಾರದೆಂದು ಪರಿಗಣಿಸಿದ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ. ಇದರೊಂದಿಗೆ ಸ್ವಾತಂತ್ರ್ಯದ ನಂತರ 76ವರ್ಷಗಳಲ್ಲಿ ಅಹಿಂದ ವರ್ಗಗಳಿಗೆ ಮುಖ್ಯಮಂತ್ರಿ ಆಗುವ ಅವಕಾಶ ಕೆಲವು ಬಾರಿ ದಕ್ಕಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    2013 ರಿಂದ 2018ರವರೆವಿಗೂ 5 ವರ್ಷಗಳ ಕಾಲ ಕಳಂಕ ರಹಿತ ಸುಭದ್ರ ಆಡಳಿತ ನೀಡಿ, ಸಮರ್ಥ ನಾಯಕತ್ವದೊಂದಿಗೆ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಿದ್ದರು. ಅತಿ ಹೆಚ್ಚು ಬಾರಿ ಹಣಕಾಸು ಸಚಿವರಾಗಿ, ಆಯವ್ಯಯ ಮಂಡಿಸಿದ್ದ ಸಿದ್ದರಾಮಯ್ಯ 2018ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶಗಳಿದ್ದರೂ ಪಿತೂರಿಯಿಂದಾಗಿ ತಪ್ಪಿತ್ತು ಎಂದು ತಿಳಿಸಿದರು.
    ಶೋಷಿತ ಸಮುದಾಯಗಳ ಉನ್ನತಿಯನ್ನೇ ಬಯಸುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಸ್ಥಾನ ವಹಿಸುತ್ತಿದ್ದಾರೆ. 5 ವರ್ಷಗಳ ಪೂರ್ಣಾವಧಿ ಪೂರೈಸಲು ಹೈಕಮಾಂಡ್ ಮತ್ತು ಕೆಪಿಸಿಸಿ ಶಾಸಕರು ಸಹಕಾರ ನೀಡಬೇಕು. ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳ ಜತೆಗೆ ಪ್ರಣಾಳಿಕೆಯ ಕಾರ್ಯಕ್ರಮಗಳನ್ನು ಈಡೇರಿಸುವ ನಂಬಿಕೆಯಿಂದ ಜನರು ಕೂಡ ಅವರ ಪ್ರಮಾಣ ವಚನ ಸ್ವೀಕಾರವನ್ನು ಎದುರು ನೋಡುತ್ತಿದ್ದಾರೆ ಎಂದರು.
    ಕುರುಬ ಸಮುದಾಯದ ಮೂವರು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಬೇಕು. ದಾವಣಗೆರೆ ಜಿಲ್ಲೆಗೆ ಸಂಪುಟ ದರ್ಜೆಯ ಸಚಿವ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಪ್ಪ, ಕಾರ್ಯಾಧ್ಯಕ್ಷ ದೀಟೂರು ಚಂದ್ರು, ಜಿ.ಷಣ್ಮುಖಪ್ಪ, ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts