ನಂದೇಶ್ವರ: ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಸಾಲಬಾಧೆ ತಾಳದೆ ಫೆ. 11ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಫೆ.19ರಂದು ಮೃತಪಟ್ಟಿದ್ದಾರೆ. ಶ್ರೀಶೈಲ ಚನ್ನಯ್ಯ ಹಿರೇಮಠ (42) ಮೃತಪಟ್ಟ ರೈತ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕೃಷ್ಣಾ ನದಿಗೆ ಭೀಕರ ಪ್ರವಾಹ ಬಂದು ಹೊಲದಲ್ಲಿ ಬೆಳೆದ ಕಬ್ಬು ಮುಳುಗಿ ನಾಶವಾಗಿತ್ತು. ಬೆಳೆ ನಾಶವಾದ್ದರಿಂದ ಮಾಡಿದ ಸಾಲ ತೀರಿಸುವ ಚಿಂತೆಯಲ್ಲಿ ತಮ್ಮ ಹೊಲದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಅಸ್ವಸ್ಥಗೊಂಡು ಒದ್ದಾಡುತ್ತಿದ್ದ ರೈತನನ್ನು ಗ್ರಾಮಸ್ಥರು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಿರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೈಗಡ ಸೇರಿ 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.