ಶ್ರೀರಂಗಪಟ್ಟಣ: ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಗ್ರಾಮದಲ್ಲಿ ಮಾ.30ರಿಂದ ಏ.2ರವರೆಗೆ ಶ್ರೀಲಕ್ಷ್ಮೀದೇವಿ ಮಾರಮ್ಮನ ದೇವರ ಜಾತ್ರೆ ನಡೆಯಲ್ಲಿದ್ದು, ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ರಸ್ತೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವಂತೆ ಹಾಗೂ ಮದ್ಯ ಮಾರಾಟಕ್ಕೆ ನಿಷೇಧಿಸಿ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಲಕ್ಷ್ಮೀದೇವಿ ಮಾರಮ್ಮ ಜಾತ್ರೋತ್ಸವದ ವೇಳೆ ರಮ್ಮನಹಳ್ಳಿ ಮತ್ತು ಕಾಳಿಸಿದ್ದನಹುಂಡಿ ಗ್ರಾಮಸ್ಥರು ಮದ್ಯಪಾನ ಮಾಡಿ ಪರಸ್ಪರ ಗಲಾಟೆ ಮಾಡಿಕೊಳ್ಳುವ ಪ್ರಕರಣ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ದಕ್ಷಿಣಾ ಪೊಲೀಸ್ ವಿಭಾಗ, ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಯೊಂದಿಗೆ ಜಂಟಿಯಾಗಿ ಚರ್ಚಿಸಿ ಮಾ.30ರ ಮಧ್ಯರಾತ್ರಿ 12 ರಿಂದ ಏ.2ರ ಮಧ್ಯರಾತ್ರಿವರೆಗೆ ತಾಲೂಕಿನ ಗಡಿ ಮಹದೇವಪುರ ರಸ್ತೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವ ಜತೆಗೆ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಶೇಖರಣೆಗೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.