More

    ಮತದಾನ ಮಾಡಾಕ ಹೊಂಟೀವಿ ಭಾರತಕ್ಕಾಗಿ.. ಕ್ರೀಡಾಂಗಣದಲ್ಲರಳಿದ ಭಾರತದ ಭೂಪಟ

    ದಾವಣಗೆರೆ : ಭಾರತದ ಬೃಹದಾಕಾರದ ಭೂಪಟದ ಸೀಮಾರೇಖೆ ಮೇಲೆ ನಿಲ್ಲುವ ಮೂಲಕ ಮತದಾನ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಕ್ರೀಡಾಂಗಣ ಸಾಕ್ಷಿಯಾಯಿತು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಸಿದ್ದಗಂಗಾ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
    ಮೈದಾನದಲ್ಲಿ ಚಿತ್ರಿಸಿದ್ದ, 300 ಅಡಿ ಎತ್ತರ, 200 ಅಡಿ ಅಗಲ ವಿಸ್ತೀರ್ಣದ ಭಾರತದ ಭೂ ನಕ್ಷೆ ಮೇಲೆ ಸಿದ್ದಗಂಗಾ ಶಾಲೆ ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ನ ನಿಲಯಾರ್ಥಿಗಳು ನಿಂತಿದ್ದರು. ಸ್ವೀಪ್, ದಾವಣಗೆರೆ ಹಾಗೂ ವೋಟ್ ಆನ್ ಮೇ ಸೆವೆಂತ್ ಎಂಬ ಇಂಗ್ಲಿಷ್ ಬರಹದ 10ರಿಂದ ಸುಮಾರು 20 ಅಡಿ ಅಳತೆಯ ಫ್ಲೆಕ್ಸ್‌ಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳು ಕಡ್ಡಾಯ ಮತದಾನದ ಸಂದೇಶ ಸಾರಿದರು.
    ಆಗಷ್ಟೇ ಮಳೆಯ ಮೋಡಗಳು ಕೂಡುತ್ತಿದ್ದ ಸಂಜೆ ವೇಳೆಗೆ ಕ್ರೀಡಾಂಗಣದಲ್ಲಿ ‘ಮತದಾನ ಮಾಡಾಕ ಹೊಂಟೀವಿ ಭಾರತಕ್ಕಾಗಿ..’ ಎಂಬ ಧ್ವನಿಮುದ್ರಿತ ಗೀತೆ ಮೊಳಗಿತು. ನನ್ನ ಮತ ನನ್ನ ಜವಾಬ್ದಾರಿ, ನಡೆದಿದೆ ಮತದಾನಕ್ಕೆ ಎಲ್ಲ ತಯಾರಿ ಮರೆಯದಿರಿ, ಮತದಾನ ನಮ್ಮೆಲ್ಲರ ಜವಾಬ್ದಾರಿ ಮೊದಲಾದ ಘೋಷವಾಕ್ಯಗಳು ಮುಗಿಲು ಮುಟ್ಟಿದವು.
    ವಿದ್ಯಾರ್ಥಿನಿಯರು ಯಕ್ಷಗಾನ, ಮಣಿಪುರಿ, ಭರತನಾಟ್ಯ, ಕಥಕ್ಕಳಿ ಮೊದಲಾದ ನಾಟ್ಯ ಮಾದರಿ, ಭಾರತಮಾತೆ ಉಡುಪಿನೊಂದಿಗೆ  ಕಳೆ ಹೆಚ್ಚಿಸಿದ್ದರು. ವಚನಾಮೃತ ತಂಡದ ಮಹಿಳೆಯರು ಡೊಳ್ಳು ಹಿಡಿದಿದ್ದರು. ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಪಾಲಕರಿಗೆ ಕೋರಿ ಬರೆದಿದ್ದ ಅಂಚೆ ಕಾರ್ಡ್‌ಗಳನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಕೈಲಿಡಿದು ಪ್ರದರ್ಶಿಸಿದರು.
    ಭಾರತದ ಭೂಪಟದ ಸುತ್ತ ಮತ ಜಾಗೃತಿಯ ಸಂದೇಶವುಳ್ಳ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ರಾಷ್ಟ್ರಧ್ವಜಗಳು ಮೈದಾನದಲ್ಲಿ ಹಾರಾಡಿದವು. ಹೊಸ ಮತದಾರರು ಕೇಕ್ ಕತ್ತರಿಸಿ ಸೇವಿಸಿದರು. ಅರಿವಿನ ಪ್ಲೆಕಾರ್ಡ್‌ಗಳು ಕಾಣಿಸಿಕೊಂಡವು. ಕಾರ್ಯಕ್ರಮವನ್ನು ಡ್ರೋಣ್ ಕ್ಯಾಮರಾ ಸೆರೆಹಿಡಿಯಿತು.
    ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಮತದಾನದ ಹಕ್ಕನ್ನು ನಾವು ಸಮರ್ಥವಾಗಿ ಬಳಸಿಕೊಂಡರೆ ಸಂವಿಧಾನ ಇನ್ನಷ್ಟು ಬಲವರ್ಧನೆ ಆಗಲಿದೆ. ಶಾಂತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದರು.
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು, 17 ಲಕ್ಷಕ್ಕೂ ಹೆಚಿನ ಮತದಾರರಿದ್ದಾರೆ. 50 ಸಾವಿರದಷ್ಟು ಯುವ ಮತದಾರರಿದ್ದಾರೆ. ಈ ಬಾರಿ ಮತದಾರರ ಚೀಟಿಯಲ್ಲಿ ನಮೂದಿಸಿದ ಕ್ಯುಆರ್ ಕೋಡ್‌ನಿಂದ ಮತಗಟ್ಟೆ ಸ್ಥಳ, ಸಂಖ್ಯೆ ಖಾತ್ರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಕ್ಷೇತ್ರದಲ್ಲಿ ಶೇ.85ಕ್ಕೂ ಹೆಚ್ಚಿನ ಮತದಾನ ಆಗಲು ಎಲ್ಲರೂ ಸಹಕಾರ ನೀಡಬೇಕು. ಮತದಾರರು ವೋಟರ್ ಹೆಲ್ಪ್‌ಲೈನ್ ಆ್ಯಪ್‌ನ ಲಾಭ ಪಡೆಯಬೇಕು ಎಂದರು. ಏ.28ರಂದು ನಮ್ಮ ಮತ ಮತಗಟ್ಟೆ ಕಡೆಗೆ ಎಂಬ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
    ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ನಮ್ಮ ಭಾರತ ಯುವಕರಿಂದ ಕೂಡಿದೆ. ಇಂದಿನ ಕಾರ್ಯಕ್ರಮದಲ್ಲಿ ಕಂಡುಬಂದ ಉತ್ಸಾಹ ಮೇ 7ರಂದು ಮತಗಟ್ಟೆಗಳಲ್ಲಿ ವ್ಯಕ್ತಪಡಿಸಬೇಕು ಎಂದು ತಿಳಿಸಿದರು.
    ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ, ಚನ್ನಗಿರಿ ಸಹಾಯಕ ನಿರ್ದೇಶಕ ರವಿಕುಮಾರ್ ಅಥರ್ಗ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬೇಬಿ ಸುನೀತಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ, ಸಿದ್ದಗಂಗಾ ಸಂಸ್ಥೆಯ ಎಂ.ಎಸ್.ಜಯಂತ್, ಹೇಮಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts