ದಾವಣಗೆರೆ : ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಪ್ರಾರ್ಥನಾ ಮಂದಿರಗಳ ಮೇಲಿನ ಅನಧಿಕೃತ ಧ್ವನಿವರ್ಧಕಗಳನ್ನು ಶೀಘ್ರ ತೆರವುಗೊಳಿಸುವಂತೆ ಶ್ರೀರಾಮಸೇನೆ ಆಗ್ರಹಿಸಿದೆ.
ಸಂಘಟನೆಯ ಕಾರ್ಯಕರ್ತರು ಮಂಗಳವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.
ಅನಧಿಕೃತ ಮೈಕ್ ಹಾವಳಿ ಹೆಚ್ಚಾಗಿದ್ದು ಶಬ್ದ ಮಾಲಿನ್ಯ ಉಂಟಾಗುತ್ತಿದೆ, ಈ ಬಗ್ಗೆ ಜಿಲ್ಲೆಯಲ್ಲಿ ಕ್ರಮ ಜರುಗಿಸದಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳ, ರೋಗಿಗಳ, ಕಾರ್ಮಿಕರ ನೆಮ್ಮದಿ ಹಾಳಾಗುತ್ತಿದೆ. ಶಾಲೆ, ಆಸ್ಪತ್ರೆ, ಕಚೇರಿಗಳಲ್ಲಿ ಕಾರ್ಯ ನಿರ್ವಹಣೆ ಕಷ್ಟದಾಯಕವಾಗಿದೆ. ಸರ್ಕಾರದ, ಸುಪ್ರೀಂ ಕೋರ್ಟ್ ಮತ್ತು ಪರಿಸರ ನ್ಯಾಯಾಲಯದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ತಕ್ಷಣವೇ ನಮ್ಮ ಜಿಲ್ಲೆಯಲ್ಲಿರುವ ಅನಧಿಕೃತ ಮೈಕ್ ತೆರವುಗೊಳಿಸಿ, ಸಾರ್ವಜನಿಕರ ನೆಮ್ಮದಿ ಕಾಪಾಡಿ ಕಾನೂನು, ಸಂವಿಧಾನ ರಕ್ಷಿಸಬೇಕೆಂದು ಒತ್ತಾಯಿಸಿದರು.
ಶ್ರೀರಾಮ ಸೇನೆಯ ರಾಜ್ಯ ಸಂಪರ್ಕ ಪ್ರಮುಖ ಪರಶುರಾಮ ನಡುಮನೆ, ಜಿಲ್ಲಾ ಪ್ರಮುಖ್ ಮಣಿ ಸರ್ಕಾರ್, ಸಾಗರ್, ರಾಹುಲ್, ಡಿ.ಬಿ. ವಿನೋದ್ ಇದ್ದರು.