More

    ದಾವಣಗೆರೆ ಜಿಲ್ಲಾ ಪೊಲೀಸ್ ಶ್ವಾನ ದಳದ ತುಂಗಾ ಸಾವು

    ದಾವಣಗೆರೆ : ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲಾ ಪೊಲೀಸ್ ಶ್ವಾನ ದಳದ (ಅಪರಾಧ ವಿಭಾಗ) ತುಂಗಾ (13) ಎಂಬ ಶ್ವಾನವು ಅನಾರೋಗ್ಯದಿಂದ ಶುಕ್ರವಾರ ಮೃತಪಟ್ಟಿತು.
    ನಾಲ್ಕು ದಿನಗಳಿಂದ ಊಟ ಬಿಟ್ಟಿದ್ದ ತುಂಗಾ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು.
    ಪೊಲೀಸರಿಗೆ ಸವಾಲಾಗಿದ್ದ ಅನೇಕ ಪ್ರಕರಣಗಳನ್ನು ತುಂಗಾ ಪತ್ತೆ ಹಚ್ಚಿತ್ತು. 71 ಕೊಲೆ ಹಾಗೂ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳನ್ನು ಭೇದಿಸಿ, 650ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಚಾತುರ್ಯ ತೋರಿತ್ತು.
    ಹೊನ್ನಾಳಿಯಲ್ಲಿ ಜೂನ್ ತಿಂಗಳಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆಯ ಆರೋಪಿಯನ್ನು ಪತ್ತೆ ಮಾಡಿದ್ದು ಅದರ ಕೊನೆಯ ಪ್ರಕರಣವಾಗಿತ್ತು. ಸೂಳೆಕೆರೆ ಗುಡ್ಡದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 12 ಕಿ.ಮೀ. ಓಡಿ ಕೊಲೆ ಆರೋಪಿಯ ಜಾಡು ಪತ್ತೆ ಹಚ್ಚಿತ್ತು.
    ಈ ಶ್ವಾನವು ಪತ್ತೆಹಚ್ಚಿದ 2 ಕೊಲೆ ಪ್ರಕರಣಗಳಲ್ಲಿ ದಾವಣಗೆರೆ ಪ್ರಥಮ ದರ್ಜೆ ನ್ಯಾಯಾಲಯದಿಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ 4 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯ ಆದೇಶವಾಗಿತ್ತು.
    ಅಮೆರಿಕನ್ ಮೂಲದ ಡಾಬರ್‌ಮನ್ ಪಿಂಚರ್ ತಳಿಯ ಈ ಶ್ವಾನವು ಬೆಂಗಳೂರಿನ ಆಡಗೋಡಿಯಲ್ಲಿರುವ ರಾಜ್ಯ ಪೊಲೀಸ್ ಶ್ವಾನ ತರಬೇತಿ ಕೇಂದ್ರದಿಂದ 2011 ರಲ್ಲಿ ದಾವಣಗೆರೆಗೆ ಬಂದಿತ್ತು.
    ಆ. 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಕಡೆಯದಾಗಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವಾಸನೆಯನ್ನು ಸೂಕ್ಷ್ಮವಾಗಿ ಗ್ರಹಿಸುವುದು ಈ ಶ್ವಾನದ ವಿಶೇಷತೆಯಾಗಿತ್ತು.

    (ಬಾಕ್ಸ್)
    ಭಾವುಕ ವಿದಾಯ
    ಪೊಲೀಸ್ ಇಲಾಖೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ತುಂಗಾ ಶ್ವಾನದ ಅಂತ್ಯಕ್ರಿಯೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಂಜೆ ನೆರವೇರಿತು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಿ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ ಸೇರಿ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು.
    ಶ್ವಾನದ ಹ್ಯಾಂಡ್ಲರ್ ಶಫಿ ಉಲ್ಲಾ ಕಣ್ಣೀರು ಹಾಕಿದರು. ನೆರೆದಿದ್ದವರು ‘ತುಂಗಾ ಅಮರ್ ರಹೇ’ ಎಂದು ಭಾವುಕ ವಿದಾಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts