ದಾವಣಗೆರೆ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ವೈದ್ಯಕೀಯ ತಪಾಸಣೆ ಮತ್ತು ಪ್ರಮಾಣಪತ್ರಗಳ ದೃಢೀಕರಣ ಮಾಡಿಸಿಕೊಳ್ಳಲು ಇಲ್ಲಿನ ಜಿಪಂ ಕಚೇರಿಗೆ ಬಂದಿದ್ದ ಅಂಗವಿಕಲ ಅಭ್ಯರ್ಥಿಗಳು, ಅಧಿಕಾರಿಗಳ ಸಂವಹನ ಕೊರತೆಯಿಂದಾಗಿ ನಾಲ್ಕೈದು ಗಂಟೆ ಪರದಾಡಿದ ಪ್ರಸಂಗ ಬುಧವಾರ ನಡೆದಿದೆ.
ಸಿಇಟಿ, ನೀಟ್ ಇನ್ನಿತರ ಪ್ರವೇಶ ಪರೀಕ್ಷೆಗಳನ್ನು ಬರೆದು, ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸುಗಳ ಸೀಟ್ ನಿರೀಕ್ಷೆಯಲ್ಲಿರುವ 15ಕ್ಕೂ ಅಧಿಕ ಅಭ್ಯರ್ಥಿಗಳು ಬಂದಿದ್ದರು.
ಅವರಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದವರು ಮತ್ತು ಪಕ್ಕದ ರಾಣೇಬೆನ್ನೂರಿನ ವಿದ್ಯಾರ್ಥಿಗಳೂ ಇದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅವರಿಗೆ ಆನ್ಲೈನ್ ಮೂಲಕ ಮಾಹಿತಿ ರವಾನಿಸಲಾಗಿತ್ತು.
ಆದರೆ ಈ ಕುರಿತು ಜಿಪಂ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಇದೇ ಯಡವಟ್ಟಿಗೆ ಕಾರಣವಾಯಿತು. ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಮಧ್ಯಾಹ್ನ 3ಗಂಟೆಗೆ ವೈದ್ಯಕೀಯ ತಪಾಸಣೆ ಆರಂಭವಾಯಿತು.
ಬೆಳಗ್ಗೆ 10 ಗಂಟೆಗೆ ಬಂದಿದ್ದ ಅಂಗವಿಕಲ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಮಧ್ಯಾಹ್ನದ ವರೆಗೂ ಕಾಯಬೇಕಾಯಿತು. ನಮಗೆ ತಿಳಿಸಿದ ಪ್ರಕಾರ ಜಿಪಂ ಕಚೇರಿಗೆ ಬಂದೆವು. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಪಾಲಕ ಮಂಜುನಾಥ್ ತಿಳಿಸಿದರು.
ವೈದ್ಯಕೀಯ ತಪಾಸಣೆ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ದೂರವಾಣಿಯಲ್ಲಿ ವಿಚಾರ ತಿಳಿದುಕೊಂಡ ನಂತರ ಪ್ರಕ್ರಿಯೆ ಮಾಡಿದ್ದೇವೆ.
> ಪದ್ಮಾ ಬಸವಂತಪ್ಪ ಜಿಪಂ ಸಿಇಒ ದಾವಣಗೆರೆ