ದಾವಣಗೆರೆ: ರಾಜ್ಯ ಸರ್ಕಾರದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಜಿಲ್ಲೆಯ ಸಮಗ್ರ ಪ್ರಗತಿಗೆ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ಜಿಲ್ಲಾಡಳಿತದಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ, ಸ್ವಾತಂತ್ರೃದ ಅಮೃತ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಸರ್ಕಾರದ ವಿವಿಧ ಇಲಾಖೆಗಳಡಿ ಜಿಲ್ಲೆಯಲ್ಲಿ ಆಗಿರುವ ಪ್ರಗತಿಯ ಚಿತ್ರಣವನ್ನು ಕಟ್ಟಿ ಕೊಟ್ಟ ಅವರು, ಮುಂಬರುವ ದಿನಗಳಲ್ಲಿ ಸಾಗಬೇಕಾದ ದಾರಿ ಬಗ್ಗೆಯೂ ತಿಳಿಸಿದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 27,714 ರೈತರ ಮಕ್ಕಳಿಗೆ 12.36 ಕೋಟಿ ರೂ. ಸಹಾಯಧನ ಪಾವತಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಮೂಲಸೌಲಭ್ಯ ಬಲಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದಿಂದ 75 ಗ್ರಾಮಗಳನ್ನು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಎಂದು ಆಯ್ಕೆ ಮಾಡಲಾಗಿದೆ. 17 ಗ್ರಾಮಗಳನ್ನು ಪ್ರಧಾನಮಂತ್ರಿ ಆದರ್ಶ ಗ್ರಾಮವೆಂದು ಘೋಷಿಸಲು ಕ್ರಮ ವಹಿಸಲಾಗಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಮೇಯರ್ ಆರ್.ಜಯಮ್ಮ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ಮಾಜಿ ಶಾಸಕ ಬಸವರಾಜ ನಾಯ್ಕ, ಮಾಜಿ ಎಂಎಲ್ಸಿ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪ್ರಸನ್ನಕುಮಾರ್, ಶಾಂತಕುಮಾರ್ ಸೋಗಿ, ಕೆ.ಎಂ.ವೀರೇಶ್ ಸೇರಿ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಒ ಡಾ.ಎ.ಚನ್ನಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.
ಆಕರ್ಷಕ ಪಥ ಸಂಚಲನ: ಶಿಸ್ತುಬದ್ಧವಾಗಿ ನಡೆದ ಪಥಸಂಚಲನದಲ್ಲಿ 22 ತಂಡಗಳು ಪಾಲ್ಗೊಂಡಿದ್ದವು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ಉಪವಿಭಾಗ ತಂಡ, ಗ್ರಾಮಾಂತರ ಉಪವಿಭಾಗ ಪೊಲೀಸ್ ತಂಡ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ರಕ್ಷಕದಳ, ಅಬಕಾರಿ ತಂಡ, ಡಿಆರ್ಆರ್ ಪಾಲಿಟೆಕ್ನಿಕ್ ಕಾಲೇಜು, ಎವಿಕೆ ಮಹಿಳಾ ಕಾಲೇಜು, ಡಿಆರ್ಎಂ ಸೈನ್ಸ್ ಕಾಲೇಜು, ಸೆಂಟ್ ಪಾಲ್ಸ್ ಕಾನ್ವೆಂಟ್ ಸ್ಕೂಲ್, ಆರ್ಎಂಎಸ್ವಿ ಶಾಲೆ, ಜೈನ್ ಪಬ್ಲಿಕ್ ಶಾಲೆ, ಸಿದ್ಧಗಂಗಾ ಪಿಯು ಕಾಲೇಜು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಪುಷ್ಪಾ ಮಹಾಲಿಂಗಪ್ಪ ಸ್ಕೂಲ್, ಎಸ್ಟಿಜೆ ಸ್ಕೂಲ್ ಟ್ರೂಪ್, ಸರ್ಟಿಫೈಡ್ ಸ್ಕೂಲ್, ಮೌನೇಶ್ವರ ಕಿವುಡ ಮತ್ತು ಮೂಗರ ಶಾಲೆ, ಅನಮೋಲ್ ಪಬ್ಲಿಕ್ ಸ್ಕೂಲ್, ಪೊಲೀಸ್ ವಾದ್ಯ ವೃಂದ ತಂಡಗಳು ಪಾಲ್ಗೊಂಡಿದ್ದವು. ಸ್ವಾತಂತ್ರೃ ಯೋಧರು, ಸಿಎಂ ಪದಕ ವಿಜೇತರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿಗೆ ನಾಮನಿರ್ದೇಶನ: ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದಡಿ ಸಾಧಿಸಿರುವ ಪ್ರಗತಿ ಪರಿಗಣಿಸಿ ದಾವಣಗೆರೆ ಜಿಲ್ಲೆಯನ್ನು ‘ಸ್ಕೋಚ್’ ಪ್ರಶಸ್ತಿಗೆ ನಾಮನಿರ್ದೇಶನ ಗೊಳಿಸಲಾಗಿದೆ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.