ರಮೇಶ ಜಹಗೀರದಾರ್ ದಾವಣಗೆರೆ : ಅತಿಸಾರ ಭೇದಿಯಿಂದ ಸಾವು ಸಂಭವಿಸುವುದನ್ನು ತಡೆಯುವುದಕ್ಕಾಗಿ ಸಮುದಾಯದಲ್ಲಿ ಅರಿವು ಮೂಡಿಸಲು ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನ. 15 ರಿಂದ 30ರ ವರೆಗೆ ಹಮ್ಮಿಕೊಂಡಿದೆ.
ದೇಶಾದ್ಯಂತ ಇದು ನಡೆಯಲಿದ್ದು ಜಿಲ್ಲೆಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಶಿಕ್ಷಣ ಇನ್ನಿತರ ಇಲಾಖೆಗಳೂ ಕೈ ಜೋಡಿಸಲಿವೆ. ಆರೋಗ್ಯವನ್ನು ಸಾಮಾಜಿಕ ಅರಿವಿನ ಆಂದೋಲನವನ್ನಾಗಿ ಮಾಡುವಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಕಳೆದ ಕೆಲ ದಶಕಗಳಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅತಿಸಾರ ಸಂಬಂಧಿ ರೋಗಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅತಿಸಾರದಿಂದ ಅಪೌಷ್ಟಿಕತೆ ಉಂಟಾಗಬಹುದು. ಬಡತನದ ಹಿನ್ನೆಲೆಯ ಮಕ್ಕಳು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಅಭಿವೃದ್ಧಿಗೆ ಇದು ತೊಡಕಾಗಿ ಪರಿಣಮಿಸಿದೆ.
ಪ್ರತಿ ವರ್ಷ ಅತಿಸಾರ ಸಂಬಂಧಿ ರೋಗಗಳಿಂದ ದೇಶದಲ್ಲಿ 62 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಾರೆ. ಸ್ವಚ್ಛತೆಯ ಕೊರತೆ, ಅಶುದ್ಧ ನೀರಿನ ಸೇವನೆ ಅತಿಸಾರ ಭೇದಿಯ ಪ್ರಮುಖ ಕಾರಣಗಳಾಗಿವೆ. 15 ದಿನಗಳಲ್ಲಿ ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.
ಈ ಪಾಕ್ಷಿಕದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಮಕ್ಕಳಿದ್ದರೆ ಮುಂಜಾಗ್ರತೆಯಾಗಿ ಒಂದು ಒಆರ್ಎಸ್ ಪ್ಯಾಕೆಟ್ ನೀಡಲಿದ್ದಾರೆ. ಜಿಲ್ಲೆಯ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಈ ಕುರಿತು ತಿಳಿವಳಿಕೆ ನೀಡಲಾಗುವುದು.
ಕೈತೊಳೆಯುವುದು ಹೇಗೆ ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಮಕ್ಕಳಿಗೆ ಭೇದಿಯಾದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ದ್ರಾವಣ ಮತ್ತು ಜಿಂಕ್ ಮಾತ್ರೆಗಳನ್ನು ನೀಡಲಾಗುವುದು.
ಆರೋಗ್ಯ ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಒಆರ್ಎಸ್ ಕಾರ್ನರ್, ಜಿಂಕ್ ಕಾರ್ನರ್ ಮಾಡಲಾಗುವುದು. ಈ ಹಿಂದೆ ಒಆರ್ಎಸ್ ಮಾತ್ರ ನೀಡಲಾಗುತ್ತಿತ್ತು, ಈಗ ಅದರ ಜತೆಗೆ ಜಿಂಕ್ ಮಾತ್ರೆಗಳನ್ನೂ ವಿತರಿಸಲಾಗುವುದು. ಹಳ್ಳಿಗಳಲ್ಲಿರುವ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವುದೂ ಈ ಕಾರ್ಯಕ್ರಮದ ಭಾಗವಾಗಿದೆ.
…
(ಕೋಟ್)
ಅತಿಸಾರ ಭೇದಿಯಿಮದ ಯಾವುದೇ ಸಾವು ಆಗಬಾರದು ಎನ್ನುವ ಉದ್ದೇಶದಿಂದ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಯೋಜಿಸಿದ್ದೇವೆ. ಈ ಅವಧಿಯಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುವುದು. ಕೈತೊಳೆಯುವುದು ಸೇರಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ನಮ್ಮ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಒಆರ್ಎಸ್ ಪ್ಯಾಕೆಟ್ ವಿತರಿಸಲಿದ್ದಾರೆ.
ಡಾ. ಎ.ಎಂ. ರೇಣುಕಾರಾಧ್ಯ, ಜಿಲ್ಲಾ ಆರ್ಸಿಎಚ್ ಅಧಿಕಾರಿ