ದಾವಣಗೆರೆ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ್ದ 5 ಸಾವಿರ ರೂ. ಧನಸಹಾಯವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಇಲಾಖೆಯ ಕಚೇರಿ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ನಂತರ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು.
ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರಿದ್ದಾರೆ. ಈಗಾಗಲೇ ಮಂಡಳಿಯಿಂದ ಕೋವಿಡ್-19 ಪರಿಹಾರವಾಗಿ 5 ಸಾವಿರ ರೂ. ಧನಸಹಾಯ ಕೆಲವು ಕಾರ್ಮಿಕರಿಗೆ ಸಿಕ್ಕಿದೆ.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡದವರೂ ಸೇವಾ ಸಿಂಧು ಆನ್ಲೈನ್ನಲ್ಲಿ ಅರ್ಜಿ ಹಾಕಿ, ಕೋವಿಡ್-19 ಪರಿಹಾರ ಪಡೆದಿದ್ದಾರೆ. ಆದರೆ ನಿಜವಾದ ಕಟ್ಟಡ ಕಾರ್ಮಿಕರಿಗೆ ಆ ಸೌಲಭ್ಯ ತಲುಪಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ನಿಗದಿಗೊಳಿಸಿದ್ದ ಕಾರ್ಮಿಕರ ಸಂಖ್ಯೆ ದಾಟಿದೆ ಎಂಬ ಕಾರಣ ನೀಡಿ, ಈಗ ಮಂಡಳಿಯು 5 ಸಾವಿರ ರೂ. ಜಮಾ ಮಾಡುವುದನ್ನು ನಿಲ್ಲಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರ ಶ್ರಮದಿಂದ ಬರುತ್ತಿರುವ ಸೆಸ್ ಹಣ ಸೇರಿ 8-10 ಸಾವಿರ ಕೋಟಿ ಹಣ ಮಂಡಳಿಯಲ್ಲಿದ್ದರೂ, ಅಧಿಕಾರಿಗಳು ಮೀನಮೇಷ ಮಾಡುತ್ತಿದ್ದಾರೆ. ವಿದ್ಯಾರ್ಥಿವೇತನ, ಮದುವೆಗೆ ನೆರವು, ಪಿಂಚಣಿ, ಆಸ್ಪತ್ರೆಗಳ ಖರ್ಚಿನ ಹಣವನ್ನು 2-3 ವರ್ಷವಾದರೂ ಕೊಟ್ಟಿಲ್ಲ ಎಂದರು.
ಸಂಘದ ಮುಖಂಡರಾದ ಜಬೀನಾ ಖಾನಂ, ಕರಿಬಸಪ್ಪ ಎಂ, ಅನ್ವರ್ಖಾನ್, ಸುಭಾನ್, ಸಾದಿಕ್, ನೂರ್ ಅಹಮದ್, ಶಿವಣ್ಣ, ತಿಪ್ಪೇಶ್ ಇದ್ದರು.