ಹುಬ್ಬಳ್ಳಿ: ಇಲ್ಲಿನ ಸ್ಟೇಶನ್ ರಸ್ತೆಯ ಬ್ಯಾಂಕ್ವೊಂದರ ಮ್ಯಾನೇಜರ್ಗೆ ಗ್ರಾಹಕರ ಸೋಗಿನಲ್ಲಿ ಮೊಬೈಲ್ ಹಾಗೂ ಇಮೇಲ್ ಮೂಲಕ ಸಂಪಕಿರ್ಸಿ, ಬರೋಬ್ಬರಿ 62 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಮೂವರು ಅಂತಾರಾಜ್ಯ ಸೈಬರ್ ಕಳ್ಳರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ನ ಗ್ರಾಹಕರೊಬ್ಬರು ತಮ್ಮ ಉದ್ಯಮದ ಸಲುವಾಗಿ ಆಗಾಗ ದೊಡ್ಡ ಪ್ರಮಾಣದ ಹಣದ ವ್ಯವಹಾರ ಮಾಡುತ್ತಿದ್ದರು. ತುರ್ತಾಗಿ ಹಣ ಬೇಕಿದ್ದಾಗ ಮೊಬೈಲ್, ಇಮೇಲ್ ಮೂಲಕ ಸಂಪಕಿರ್ಸಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಕದ್ದ ಸೈಬರ್ ಕಳ್ಳರು ಜು.30ರಂದು ಆ ಗ್ರಾಹಕನ ಸೋಗಿನಲ್ಲಿ ಮ್ಯಾನೇಜರ್ಗೆ ಕರೆ ಮಾಡಿ ಆರ್ಟಿಜಿಎಸ್ ಮುಖಾಂತರ ಹಂತ ಹಂತವಾಗಿ 62 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಗೊತ್ತಾದ ಕೂಡಲೇ ಮ್ಯಾನೇಜರ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್ಸ್ಪೆಕ್ಟರ್ ಎಂ.ಎಸ್.ಹೂಗಾರ ಹಾಗೂ ಸಿಬ್ಬಂದಿ ಗುಜರಾತ್ನ ಗಾಂಧಿ ನಗರದಲ್ಲಿ ಇಬ್ಬರು ಹಾಗೂ ಬಿಹಾರದ ಗೋಪಾಲಗಂಜನಲ್ಲಿ ಒಬ್ಬನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ತಂಡದ ಕಾರ್ಯವನ್ನು ಆಯುಕ್ತರು ಶ್ಲಾಘಿಸಿದ್ದಾರೆ.
ಕಿಂಗ್ಪಿನ್ ಹ್ಯಾಕರ್ಸ್ ನಾಪತ್ತೆ
ವಂಚನೆ ಪ್ರಕರಣದಲ್ಲಿ ಕಿಂಗ್ಪಿನ್ಗಳು ಎನ್ನಲಾದ ಹ್ಯಾಕರ್ಸ್ ತಲೆಮರೆಸಿಕೊಂಡಿದ್ದಾರೆ. ಬಂಧಿತರ ಮೂವರು ಈ ಹ್ಯಾಕರ್ಸ್ಗೆ ಸಹಕಾರ ನೀಡುತ್ತಿದ್ದರು. 5, 10 ಸಾವಿರ ರೂ. ಕೊಟ್ಟು ಅಮಾಯಕರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಯಿಸಿ ಅದರ ಮೂಲಕ ವಂಚಕರ ಹಣ ವರ್ಗಾವಣೆಗೆ ದಾರಿ ಮಾಡಿಕೊಡುತ್ತಿದ್ದರು. ಪ್ರಮುಖ ಆರೋಪಿಗಳಾದ ಹ್ಯಾಕರ್ಸ್ ಬಂಧನಕ್ಕೆ ಖಾಕಿ ತಂಡ ಬಲೆ ಬೀಸಿದೆ.