ಜೈಪುರ: ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಬಹುಶಃ ಕುತೂಹಲ ಮತ್ತು ಇಂಟರ್ನೆಟ್ ಕಾರಣ ಇರಬಹುದೆಂದು ರಾಜಸ್ಥಾನದ ಡಿಜಿಪಿ ಭೂಪೇಂದ್ರ ಸಿಂಗ್ ಯಾದವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಹಾಥರಸ್ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್ರೇಪ್ ಪ್ರಕರಣ ಸೇರಿದಂತೆ ದೇಶದಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ರೇಪ್ ಪ್ರಕರಣಗಳ ಬೆನ್ನಲ್ಲೇ ರಾಜಸ್ಥಾನ ಡಿಜಿಪಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ, ಯುವ ಜನಸಂಖ್ಯಾ ಏರಿಕೆ, ಇಂಟರ್ನೆಟ್ ಮತ್ತು ಕುತೂಹಲವೇ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳಾಗಿವೆ ಎಂದು ಹೇಳಿಕೆ ನೀಡಿದ್ದಾರೆ.
ಇಡೀ ಉತ್ತರ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಕ್ರೂರ ಅಪರಾಧಗಳು ಹೆಚ್ಚುತ್ತಲೇ ಇರುವುದು ನಮ್ಮ ಅನುಭವಕ್ಕೆ ಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಕೆಲ ಮಕ್ಕಳು ಇಂಟರ್ನೆಟ್ ಅನ್ನು ಸ್ಪೂರ್ತಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಯುವಕರಲ್ಲಿ ಕುತೂಹಲವು ಸಹ ಅಪರಾಧಗಳಿಗೆ ಪ್ರಚೋದನೆಯಾಗಿದೆ. ಸಾಮಾನ್ಯವಾಗಿ 18 ವರ್ಷಕ್ಕಿಂತ ಕೆಳಗಿನವರಿಗೆ ಸಂಬಂಧಗಳಲ್ಲಿ ಪ್ರವೇಶಿಸಲು ಕಾನೂನಾತ್ಮಕವಾಗಿ ಅವಕಾಶ ನೀಡುವುದಿಲ್ಲ. ಆದರೆ, ಇದೇ ಕುತೂಹಲದಿಂದ ಅಂತರ್ಜಾಲದಲ್ಲಿ ಅವರು ಏನನ್ನು ನೋಡುತ್ತಾರೆ, ಅದರ ಫಲಿತಾಂಶ ಫ್ರೆಂಡ್ಶಿಪ್ನಲ್ಲಿ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಲೇ ಇವೆ. ಅದರಲ್ಲೂ ಹಾಥರಸ್ನಲ್ಲಿ ನಡೆದಿದೆ ಎನ್ನಲಾದ ಗ್ಯಾಂಗ್ರೇಪ್ ಪ್ರಕರಣ ದೇಶಾದ್ಯಂತ ಆಕ್ರೋಶದ ಕಿಚ್ಚು ಹಚ್ಚಿದೆ. ಇದೇ ಸಮಯದಲ್ಲಿ ಡಿಜಿಪಿ ಹೇಳಿಕೆ ನೀಡಿರುವುದು ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್)