ಹೊನ್ನಾಳಿ: ಐವತ್ತು, ಅರವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಎಲ್ಲ ಅರ್ಹ ಸಾಗುವಳಿದಾರರಿಗೂ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಸೋಮವಾರ ತಾಲೂಕು ಕಚೇರಿಯಲ್ಲಿ ಅರಕೆರೆ ಗ್ರಾಮದ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಚುನಾವಣೆಯಲ್ಲಿ ಮಾತ್ರ ನಮ್ಮ ಪಕ್ಷ, ನಿಮ್ಮ ಪಕ್ಷ ಎಂದು ಹೋರಾಡುತ್ತೇವೆ. ಆದರೆ, ಚುನಾವಣೆ ನಡೆದು ಅಧಿಕಾರಕ್ಕೆ ಬಂದ ನಂತರ ಪಕ್ಷಾತೀತ ಆಡಳಿತ ನಡೆಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಎಂದರು.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಯಾರ್ಯಾರು ಸಾಗುವಳಿ ಮಾಡುತ್ತಿದ್ದಾರೋ ಅವರೆಲ್ಲ 50, 53 ನಮೂನೆಯಡಿ ಅರ್ಜಿ ಸಲ್ಲಿಸಬೇಕು. ಬಗರ್ಹುಕುಂ ಸಮಿತಿಯಲ್ಲಿ ಚರ್ಚಿಸಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಶೀಘ್ರ ಬಗರ್ಹುಕುಂ ಸಮಿತಿ ರಚನೆ: ಜುಲೈ ತಿಂಗಳ ಕೊನೆ ವಾರದಲ್ಲಿ ಬಗರ್ಹುಕುಂ ಕಮಿಟಿ ರಚನೆ ಮಾಡಲಾಗುವುದು. ಕಮಿಟಿಗೆ ನಾನೇ ಅಧ್ಯಕ್ಷನಾಗಿರುತ್ತೇನೆ. ಉಳಿದವರ ಆಯ್ಕೆ ಮಾಡಿ, ತಿಂಗಳ ಅಂತ್ಯದಲ್ಲಿ ಕಮಿಟಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಿಂದ ಬರುವ ರೈತರು-ಜನಸಾಮಾನ್ಯರನ್ನು ತಾಲೂಕು ಕಚೇರಿಗೆ ಅಲೆಸಬಾರದು. ಅವರಿಗೆ ಕಚೇರಿಯಿಂದ ಆಗಬೇಕಾದ ಕೆಲಸ ತಕ್ಷಣ ಮಾಡಿಕೊಡಿ. ವಿನಾಕಾರಣ ಅವರನ್ನು ಅಲೆದಾಡಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಹಿಂದಿನ ಬಗರ್ಹುಕುಂ ಸಮಿತಿಯಲ್ಲಿ ತಾಲೂಕಿನ ಅರಕೆರೆ ಗ್ರಾಮದ ಸರ್ವೇ ನಂ. 103ರಲ್ಲಿ 24 ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿತ್ತು. ಆದರೆ, ಅಷ್ಟೊತ್ತಿಗೆ ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ಹಕ್ಕುಪತ್ರ ನೀಡಲಾಗಿರಲಿಲ್ಲ. ಈಗ ನೂತನ ಶಾಸಕ ಡಿ.ಜಿ. ಶಾಂತನಗೌಡ ಹಕ್ಕುಪತ್ರ ವಿತರಿಸಿದರು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಧುಗೌಡ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ ಇತರರು ಇದ್ದರು.