ಮಂಗಳೂರು: ರಾಜ್ಯದಲ್ಲಿ ಬರಗಾಲ ಕಾಡಲು ಸಿಎಂ ಸಿದ್ದರಾಮಯ್ಯ ಅವರ ಕಾಲ್ಗುಣವೇ ಕಾರಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಕಾಡಿದ್ದು, ಇದನ್ನು ಕಾಕತಾಳೀಯ ಎಂದು ಭಾವಿಸಿಲ್ಲ. ಕಾಲ್ಗುಣದ ಕಾರಣ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿ.ಟಿ. ರವಿ ಬರ ನಮ್ಮ ರಾಜ್ಯವನ್ನು ಕಾಡುತ್ತಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಅಪರೂಪವಾಗಿದೆ. ಇದಕ್ಕೆ ಕಾಂಗ್ರೆಸ್ನವರ ಕಾಲ್ಗುಣವೇ ಕಾರಣ ಎಂದಿದ್ದಾರೆ.
ಕೋವಿಡ್ ಕಾಣಿಸಿಕೊಂಡಾಗ ಅದಕ್ಕೆ ಬಿಜೆಪಿ ಕಾರಣ ಎಂಬ ಪ್ರಶ್ನೆಗೆ, ಕೋವಿಡ್ ಜಾಗತಿಕವಾಗಿ ಎಲ್ಲರನ್ನೂ ಕಾಡಿದೆ. ನರೇಂದ್ರ ಮೋದಿ ಅವರು 2014ರಿಂದಲೂ ಪ್ರಧಾನಿ ಆಗಿದ್ದಾರೆ. 2020ರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಮಯ ಬರ ಕಾಣಿಸಿಕೊಂಡಿದೆ. ಇದು ಕಾಕತಾಳೀಯವೂ ಆಗಿರಬಹುದು.
ಇದನ್ನೂ ಓದಿ: ಮಲಗಿದ್ದವರ ಮೇಲೆ ಹರಿದ ಟೆಂಪೋ; ಇಬ್ಬರು ಮೃತ್ಯು, ಐವರು ಗಂಭೀರ
ವಿರೋಧ ಪಕ್ಷದ ನಾಯಕನ ನೇಮಕ ಆಗದಿರುವುದು ತಂತ್ರಗಾರಿಕೆಯ ಭಾಗವಾಗಿದೆ. ಇಡೀ ದೇಶದಲ್ಲಿ ಎಲ್ಲೂ ಸಹ ಈ ರೀತಿಯಾಗಿಲ್ಲ. ರಾಜ್ಯದಲ್ಲಿ ಕೆಲವು ತಂತ್ರಗಾರಿಕೆ ಪ್ರಯೋಗ ಮಾಡಿದ್ದೇವೆ. ವಿಪಕ್ಷ ನಾಯಕನ ನೇಮಕ ಮಾಡುವ ವಿಚಾರದಲ್ಲಿ ತಡವಾಗಿರುವುದು ನಿಜ ಇದರ ಹಿಂದೆ ವರಿಷ್ಠರು ಒಂದು ಸ್ಪಷ್ಟ ಉದ್ಧೇಶವನ್ನಿಟ್ಟುಕೊಂಡಿದ್ದಾರೆ. ಅದಕ್ಕಾಗಿ ತಡ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ ಹಣಕ್ಕೆ ಮಣೆ ಹಾಕಿ ಟಿಕೆಟ್ ಕೊಡುವ ಪರಿಸ್ಥಿತಿ ನಮ್ಮ ಪಕ್ಷದಲ್ಲಿಲ್ಲ. ಬಿಜೆಪಿ ಈಗ ಅತಿದೊಡ್ಡ ಪಕ್ಷವಾಗಿದ್ದು, ಯಾರೂ ಬೇಕಾದರೂ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳಬಹುದು. ಪ್ರಕರಣ ಸಂಬಂಧ ಸರಿಯಾದ ತನಿಖೆಯಾಗಬೇಕಿದ್ದು, ಸತ್ಯಾಸತ್ಯತೆ ಹೊರಬರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.