ಅರಕೇರಾ: ಪಟ್ಟಣದ ಕೆಲವು ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಬರಗಾಲದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಲ್ಲಿ ಜಾನುವಾರುಗಳಿಗೆ ರೋಗ ತಗುಲಿರುವುದು ಆತಂಕ ಸೃಷ್ಟಿಸಿದೆ.
ಚರ್ಮಗಂಟು ಜಾನುವಾರುಗಳಲ್ಲಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೋಗ ತಗುಲಿದ ಜಾನುವಾರುಗಳನ್ನು ಕಚ್ಚಿದ ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕೀಟಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದಾಗ ರೋಗ ಹರಡುತ್ತದೆ. ಎರಡು ವರ್ಷಗಳ ಹಿಂದೆ ಚರ್ಮಗಂಟು ರೋಗ ತೀವ್ರವಾಗಿ ಹರಡಿದಾಗ ನೂರಾರು ಜಾನುವಾರುಗಳು ಸತ್ತಿದ್ದವು. ಆ ಬಳಿಕ ಜಾನುವಾರುಗಳ ಸಾಕಣೆ ಸವಾಲಾಗಿ ಪರಿಣಮಿಸಿದ್ದು, ಅನೇಕ ರೈತರು ಹೈನುಗಾರಿಕೆಯಿಂದ ದೂರ ಸರಿದಿದ್ದಾರೆ.