ಕೊಲಂಬೋ: ಭಾರತ ವಿರುದ್ಧದ ಏಷ್ಯಾಕಪ್ ಫೈನಲ್ ಮುನ್ನಾದಿನದಂದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತವೊಂದು ಬಿದ್ದಿದೆ. ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ಭಾನುವಾರ ನಡೆಯುವ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾ ಸ್ಪಿನ್ನರ್ ಮಹೇಶ್ ತೀಕ್ಷಣ ಅವರು ಭಾರತದ ವಿರುದ್ಧ ಭಾನುವಾರ ನಡೆಯುವ 2023ರ ಏಷ್ಯಾ ಕಪ್ ಫೈನಲ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಫೈನಲ್ಗೂ ಮುನ್ನ ದಸೂನ್ ಶಾನಕ ನಾಯಕತ್ವದ ಶ್ರೀಲಂಕಾ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಶ್ರೀಲಂಕಾ ಕ್ರಿಕೆಟ್ ಕೌನ್ಸಿಲ್ ಗುರುವಾರ ಪಾಕಿಸ್ತಾನ ವಿರುದ್ದ ನಡೆದ ಸೂಪರ್-4 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮಹೇಶ್ ತೀಕ್ಷ್ಣ ಸ್ನಾಯುಸೆಳೆತಕ್ಕೆ ತುತ್ತಾಗಿದ್ದರು. ಈ ಹಿನ್ನಲೆಯಲ್ಲಿ ಏಷ್ಯ ಕಪ್ ಫೈನಲ್ ಪಂದ್ಯದಿಂದ ಮಹೇಶ್ ಅವರು ಹೊರಗುಳಿದಿದ್ದಾರೆ. ಮಹೇಶ್ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದು, ಏಕದಿನ ವಿಶ್ವಕಪ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 168 ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ವ್ಯಯಿಸಿದ ರೈಲ್ವೇ ಇಲಾಖೆ
2023ರಲ್ಲಿ 15 ಪಂದ್ಯಗಳನ್ನಾಡಿರುವ ಮಹೇಶ್ ತೀಕ್ಷ್ಣ 17.45ರ ಸರಾಸರಿಯಲ್ಲಿ 31 ವಿಕೆಟ್ ಪಡೆದಿದ್ದಾರೆ. ಅವರು ಮುಂಬರು ವಿಶ್ವಕಪ್ ಹಾಗೂ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪ್ರಮುಖ ಅಸ್ತ್ರ ಎಂದೇ ಹೇಳಲಾಗಿತ್ತು. ಮಹೇಶ್ ಅವರ ಬದಲಿಗೆ ಬ್ಯಾಟ್ಸ್ಮನ್ ಸಹನ್ ಅರಾಚ್ಚಿ ಅವರು ತಂಡವನ್ನು ಕೂಡಿಕೊಂಡಿದ್ದಾರೆ.
ಈಗಾಗಲೇ ವಾನಿಂದು ಹಸರಂಗ, ದುಷ್ಮಂತಾ ಚಮೀರಾ, ಲಹಿರು ಕುಮಾರ ಹಾಗೂ ಲಹಿರು ಮಧುಶನಕ ಅವರ ಸೇವೆಯನ್ನು ಶ್ರೀಲಂಕಾ ಕಳೆದುಕೊಂಡಿದೆ. ಇದೀಗ ಮಹೇಶ್ ತೀಕ್ಷಣ ಗಾಯಕ್ಕೆ ತುತ್ತಾಗಿರುವ ಕಾರಣ, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ಶ್ರೀಲಂಕಾ ಟೀಮ್ ಮ್ಯಾನೇಜ್ಮೆಂಟ್ಗೆ ಆತಂಕ ಶುರುವಾಗಿದೆ.