More

    ಕ್ರಿಪ್ಟೊಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಆರ್​​ಬಿಐ ಗವರ್ನರ್​; ಹೂಡಿಕೆದಾರರಿಗೂ ಹುಷಾರು ಎಂಬ ಕಿವಿಮಾತು

    ನವದೆಹಲಿ: ಕೇಂದ್ರ ಸರ್ಕಾರ ಡಿಜಿಟಲ್​ ಇಂಡಿಯಾಗೆ ಒತ್ತುಕೊಡುತ್ತಿದ್ದು, ಈ ಸಲದ ಬಜೆಟ್​ನಲ್ಲಿ ಡಿಜಿಟಲ್​ಗೆ ಭಾರಿ ಆದ್ಯತೆಯನ್ನೇ ನೀಡಿದೆ. ಮಾತ್ರವಲ್ಲ ಸರ್ಕಾರದ್ದೇ ಆದ ಡಿಜಿಟಲ್ ರುಪೀಯನ್ನು ಚಲಾವಣೆಗೆ ತರುವುದಾಗಿಯೂ ಹೇಳಿದೆ.

    ಆದರೆ ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್​ ಶಕ್ತಿಕಾಂತ ದಾಸ್ ಅವರು ಕ್ರಿಪ್ಟೊಕರೆನ್ಸಿ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕ್ರಿಪ್ಟೊಕರೆನ್ಸಿ ಖಾಸಗಿಯಾಗಿ ಸೃಷ್ಟಿಸುವಂಥದ್ದು, ಅದರಿಂದ ದೇಶದ ಆರ್ಥಿಕತೆಗೆ ಹಾಗೂ ಹಣಕಾಸು ಸ್ಥಿರತೆಗೆ ಆತಂಕವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನು ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರಿಗೂ ಅವರು ಕಿವಿಮಾತು ಹೇಳಿದ್ದಾರೆ. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರಿಗೆ ಆರ್​ಬಿಐ ಯಾವಾಗಲೂ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದೆ ಎಂಬುದನ್ನು ಅವರು ಹೇಳಿದ್ದಾರೆ.

    ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವವರು ಅದನ್ನು ತಮ್ಮ ವೈಯಕ್ತಿಕ ರಿಸ್ಕ್​ನಿಂದ ಮಾಡುತ್ತಿದ್ದೇವೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು ಎಂಬುದನ್ನು ನಾನು ಈ ಹಿಂದೆಯೂ ಹೇಳಿದ್ದೇನೆ ಎಂಬುದಾಗಿ ಅವರು ತಿಳಿಸಿದ್ದಾರೆ.

    ಇನ್ನು ಸರ್ಕಾರ ತರಲಿರುವ ಡಿಜಿಟಲ್ ರುಪೀ ಕುರಿತು ಕೂಡ ಅವರು ಇದೇ ಸಂದರ್ಭಲ್ಲಿ ಪ್ರಸ್ತಾಪಿಸಿದ್ದು, 2022-23ನೇ ಸಾಲಿನಲ್ಲಿ ಡಿಜಿಟಲ್ ರುಪೀಯನ್ನು ಆರ್​​ಬಿಐ ಚಲಾವಣೆಗೆ ತರಲಿದೆ ಎಂದು ಹೇಳಿದ್ದಾರೆ. ಯಾವಾಗ ಎಂದು ಸದ್ಯಕ್ಕೆ ಹೇಳಲಾಗದಿದ್ದರೂ ಇದೇ ಆರ್ಥಿಕ ವರ್ಷದಲ್ಲಿ ಡಿಜಿಟಲ್ ರುಪೀ ಜಾರಿಗೆ ಬರಲಿದೆ ಎಂದಿದ್ದಾರೆ. ಅಲ್ಲದೆ ಡಿಜಿಟಲ್​ ರುಪೀಗೂ ಎಂದಿನ ಸಾಮಾನ್ಯ ರೂಪಾಯಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಕ್ರಿಪ್ಟೊ ಕರೆನ್ಸಿಗೆ ಡಿಜಿಟಲ್ ರುಪಿ ಪೈಪೋಟಿ: ಭಾರತ ಸರ್ಕಾರದಿಂದಲೇ ಡಿಜಿಟಲ್ ಕರೆನ್ಸಿ ಜಾರಿ ಘೋಷಣೆ

    ಆರ್​ಬಿಐ ಡೆಪ್ಯುಟಿ ಗವರ್ನರ್​ ಟಿ.ರವಿಶಂಕರ್ ಅವರು ಡಿಜಿಟಲ್ ರುಪೀ ಕುರಿತು ಮತ್ತಷ್ಟು ವಿವರವಾಗಿ ತಿಳಿಸಿದ್ದಾರೆ. ಸದ್ಯ ಚಲಾವಣೆಯಲ್ಲಿರುವ ಮುದ್ರಿತ ನೋಟಿನ ರೂಪಾಯಿಗೂ ಡಿಜಿಟಲ್ ರೂಪಾಯಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎರಡನ್ನೂ ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಿಕೊಳ್ಳಬಹುದು. ಆದರೆ ಡಿಜಿಟಲ್ ರುಪೀ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮತ್ತೊಂದು ವೃದ್ಧ ದಂಪತಿಯ ಬರ್ಬರ ಕೊಲೆ: ಇಲ್ಲೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆ!

    ಸಾಮಾನ್ಯ ರೂಪಾಯಿ ಹಾಗೂ ಡಿಜಿಟಲ್ ರುಪೀ ಎರಡೂ ಒಂದೇ. ಮುದ್ರಿತ ನೋಟುಗಳನ್ನು ನೀವು ಪರ್ಸ್​ನಲ್ಲಿ ಅಥವಾ ಕಿಸೆಯಲ್ಲಿ ಇಟ್ಟುಕೊಂಡಿರುತ್ತೀರಿ, ಹಾಗೇ ಡಿಜಿಟಲ್​ ರುಪೀಯನ್ನು ಮೊಬೈಲ್​​ಫೋನ್​ನಂಥ ಉಪಕರಣದಲ್ಲಿ ಇಟ್ಟುಕೊಂಡಿರುತ್ತೀರಿ. ಇನ್ನು ಮಾಮೂಲಿ ನೋಟು/ರೂಪಾಯಿಯಂತೆ ಡಿಜಿಟಲ್ ರುಪೀ ಆರ್​ಬಿಐ ಮಾನ್ಯತೆ/ಹೊಣೆಗಾರಿಕೆ ಹೊಂದಿರುತ್ತದೆ. ಆದರೆ ಕ್ರಿಪ್ಟೊಕರೆನ್ಸಿ ಖಾಸಗಿಯಾಗಿ ಸೃಷ್ಟಿಸಿದ ಹಣವಾಗಿರುತ್ತದೆ ಎಂದು ರವಿಶಂಕರ್​ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

    ಹಿಜಾಬ್​ ವಿವಾದ: ಹೈಕೋರ್ಟ್​ನಿಂದ ಮಹತ್ವದ ಸೂಚನೆ; ಶಾಲಾ-ಕಾಲೇಜು ಆರಂಭಿಸಿ, ಆದರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts