More

    ಕೋಚಿಮುಲ್ ಹಗರಣ, ಸ್ವತಂತ್ರ ತನಿಖೆ ಅಗತ್ಯ; ರಾಜ್ಯಪಾಲ, ಲೋಕಾಯುಕ್ತಕ್ಕೆ ಪತ್ರ ಬರೆದ ಇ.ಡಿ

    ಬೆಂಗಳೂರು: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಕೋಚಿಮುಲ್) ನಡೆದ ಅಕ್ರಮ ನೇಮಕಾತಿ ಮತ್ತು ಅನರ್ಹರಿಗೆ ಜಮೀನು ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ. ಈ ಬಗ್ಗೆ ಎಫ್ ಐಆರ್ ದಾಖಲಿಸಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ರಾಜ್ಯಪಾಲ ಮತ್ತು ಲೋಕಾಯುಕ್ತರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಪತ್ರ ಬರೆದಿದೆ.

    ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಭೂಮಂಜೂರಾತಿ ಸಮಿತಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮತ್ತು ಸಹಚರರ ವಿರುದ್ಧ ಜನವರಿಯಲ್ಲಿ ನಡೆಸಿದ ತನಿಖೆಯಲ್ಲಿ ಒಂದೇ ತಿಂಗಳಲ್ಲಿ 150 ಕೋಟಿ ರೂ. ಮೌಲ್ಯದ 80 ಎಕರೆ ಜಮೀನನ್ನು ಅನರ್ಹರಿಗೆ ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

    ಕೋಚಿಮುಲ್‌ನಲ್ಲಿ 81 ಹುದ್ದೆಗಳಿಗೆ ನೇಮಕಾತಿಗೆ ಮಂಗಳೂರು ವಿವಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಶೇ. 85 ಲಿಖಿತ ಪರೀಕ್ಷೆ ಮತ್ತು ಶೇ. 15 ಸಂದರ್ಶನಕ್ಕೆ ಅಂಕ ನಿಗದಿ ಮಾಡಲಾಗಿತ್ತು. ನಂಜೇಗೌಡ, ಕೋಚಿಮುಲ್ ಮಂಡಳಿ ನಿರ್ದೇಶಕ ಕೆ. ಎನ್. ನಾಗರಾಜ್ ನೇತೃತ್ವದ ನೇಮಕಾತಿ ಸಮಿತಿಯಲ್ಲಿ ಸಹಕಾರಿ ಇಲಾಖೆಯ ಹೆಚ್ಚುವರಿ ನಿಬಂಧಕ ಲಿಂಗರಾಜು, ಕರ್ನಾಟಕ ಹಾಲು ಒಕ್ಕೂಟದ ಪ್ರತಿನಿಧಿ ಬಿ.ಪಿ. ರಾಜು ಮತ್ತು ಕೋಮುಲ್ ಎಂಡಿ ಗೋಪಾಲ ಮೂರ್ತಿ ಇದ್ದರು. 2023ರ ಡಿಸೆಂಬರ್‌ನಲ್ಲಿ 320 ಅಭ್ಯರ್ಥಿಗಳನ್ನು, ಸಂದರ್ಶನದಲ್ಲಿ 75 ಅಭ್ಯರ್ಥಿಗಳಿದ್ದ ಅಂತಿಮ ಪಟ್ಟಿಯನ್ನು ಕೋಚಿಮುಲ್ ಅನುಮೋದಿಸಿದೆ. ಅಂತಿಮ ಲಿತಾಂಶ ಪ್ರಕಟಿಸದೆ ತರಬೇತಿಗಾಗಿ ಕಳುಹಿಸಲಾಯಿತು.

    ಅಂದರೆ ಒಎಂಆರ್ ಶೀಟ್‌ಗಳನ್ನು ತಿರುಚಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟು, ಪ್ರತಿ ಅಭ್ಯರ್ಥಿಯಿಂದ 20ರಿಂದ 30 ಲಕ್ಷ ರೂ. ಪಡೆದಿರುವುದು ಬೆಳಕಿಗೆ ಬಂದಿತ್ತು. ಇ.ಡಿ. ದಾಳಿ ವೇಳೆ ಮೈಸೂರು ವಿವಿ ಮತ್ತು ಕೋಚಿಮುಲ್ ನಿರ್ದೇಶಕರ ಕರೆಗಳು ಮತ್ತು ವಾಟ್ಸ್‌ಆ್ಯಪ್ ಚಾಟ್‌ಗಳು ಲಭ್ಯವಾಗಿದ್ದವು. ಹೀಗಾಗಿ ರಾಜ್ಯಪಾಲರು ಮತ್ತು ಲೋಕಾಯುಕ್ತ ಸಂಸ್ಥೆ ಕೂಡಲೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಇ.ಡಿ. ಅಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts