ನಾಡಿಯ : ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯಲ್ಲಿ ಅಕ್ರಮವಾಗಿ ಭಾರತ-ಬಾಂಗ್ಲಾದೇಶ ಗಡಿ ದಾಟಿದ ಯುವಜೋಡಿಯನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯು ಬಂಧಿಸಿದೆ. ವಿಚಾರಣೆ ಮಾಡಿದಾಗ, ಆನ್ಲೈನ್ ಪರಿಚಯವಾಗಿ, ಪ್ರೇಮಾಂಕುರವಾಗಿ ಗಡಿಯ ಆಚೀಚೆ ಇದ್ದರೂ ಮದುವೆ ಆಗುವ ನಿರ್ಧಾರ ತೆಗೆದುಕೊಂಡ ನವವಿವಾಹಿತರು ಎಂದು ತಿಳಿದುಬಂದಿದೆ.
ಜೂನ್ 26 ರಂದು, ಬೇಹುಗಾರರು ಗಡಿಯಲ್ಲಿ ಸಂಚಾರ ನಡೆಯುತ್ತಿರುವ ಬಗ್ಗೆ ಮಾಧುಪುರ್ ಬಾರ್ಡರ್ ಔಟ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ನ 82 ಬಟಾಲಿಯನ್ ಟ್ರೂಪ್ನ ಸಿಪಾಯಿಗಳಿಗೆ ಸುಳಿವು ನೀಡಿದರು. ಸಂಜೆ 4:15 ಕ್ಕೆ ಜೋಡಿಯೊಂದು ಗಡಿ ರಸ್ತೆಯಲ್ಲಿ ಕಾಣಿಸಿಕೊಂಡಿತು. ಗುರುತಿನ ಬಗ್ಗೆ ಕೇಳಿದಾಗ, ಯುವಕನು ಬಂಗಾಳದ ನಾಡಿಯ ಜಿಲ್ಲೆಯ ಬಲ್ಲವಪುರ ಗ್ರಾಮದ ನಿವಾಸಿ ಜೈಕಾಂತೋ ಚಂದ್ರ ರೈ(24) ಎಂದು ತಿಳಿದುಬಂತು.
ಇದನ್ನೂ ಓದಿ: ಬೆಡ್ಶೀಟ್ ಸುತ್ತಿ, ಆಟೋದಲ್ಲಿ ಹೆಣ ಸಾಗಿಸುತ್ತಿದ್ದ ಯುವಕರು!
ಆದರೆ ಯುವತಿ ತನ್ನ ಬಗ್ಗೆ ಏನೂ ಹೇಳದ ಕಾರಣ, ಅನುಮಾನಗೊಂಡ ಸಿಬ್ಬಂದಿ ಇಬ್ಬರನ್ನೂ ಬಂಧಿಸಿದರು. ವಿಚಾರಣೆ ನಡೆಸಿದಾಗ ಇವರದು ಗಡಿರೇಖೆ ಮೀರಿದ ಪ್ರೇಮಕಥೆ; 18 ವರ್ಷ ವಯಸ್ಸಿನ ಯುವತಿಯು ಬಾಂಗ್ಲಾದೇಶದ ನೆರೈಲ್ ಪ್ರದೇಶದ ನಿವಾಸಿ ಎಂಬುದು ತಿಳಿದುಬಂದಿದೆ. ಮುಂದಿನ ಕ್ರಮ ಕೈಗೊಳ್ಳಲು ಇಬ್ಬರನ್ನೂ ಭೀಮಪುರ ಪೊಲೀಸರ ವಶಕ್ಕೆ ನೀಡಲಾಗಿದೆ.
ಪ್ರೇಮಪಯಣ : ರೈ ಮತ್ತು ಯುವತಿಯು ಫೇಸ್ಬುಕ್ನಲ್ಲಿ ಪರಿಚಯವಾಗಿದ್ದು, ಮದುವೆಯಾಗುವ ನಿರ್ಣಯ ಮಾಡಿಕೊಂಡರು. ಮಾರ್ಚ್ 8 ರಂದು ರೈ, ಅಪ್ಪು ಎಂಬ ದಲ್ಲಾಳಿಯ ಸಹಾಯದಿಂದ ತಾರಕ್ನಗರದಿಂದ ಬಾಂಗ್ಲಾದೇಶಕ್ಕೆ ಗಡಿ ದಾಟಿ ಹೋದ. ಮಾರ್ಚ್ 10 ರಂದು ಆಕೆಯನ್ನು ವಿವಾಹವಾಗಿ ಜೂನ್ 25 ರವರೆಗೆ ಅಲ್ಲೇ ಇದ್ದ ರೈ, ಮತ್ತೆ ಹೆಂಡತಿಯೊಂದಿಗೆ ಭಾರತಕ್ಕೆ ಹಿಂತಿರುಗುವ ಯೋಜನೆ ಮಾಡಿದ. ಇದಕ್ಕಾಗಿ ರಾಜು ಮಂಡಲ್ ಎಂಬ ದಲ್ಲಾಳಿಗೆ ಗಡಿ ದಾಟಲು 10,000 ಬಾಂಗ್ಲಾದೇಶಿ ಟಾಕಾ ನೀಡಿ ಈರ್ವರೂ ಅಕ್ರಮವಾಗಿ ಗಡಿ ದಾಟಿ ಬಂದರು ಎನ್ನಲಾಗಿದೆ. (ಏಜೆನ್ಸೀಸ್)
ಗಡಿಗ್ರಾಮಗಳ ಕನ್ನಡ ಹೆಸರು ಬದಲಾಯಿಸೋ ಪ್ರಕ್ರಿಯೆ ಕೈಬಿಡಿಸಿ: ಲಿಂಬಾವಳಿ