More

    ಎಚ್‌ಡಿಕೆ ದೇವರಾಜೇಗೌಡ ಏಕೆ ಭೇಟಿಯಾಗಿದ್ರಂತೆ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನೆ

    ಮಂಡ್ಯ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ವಕೀಲ ದೇವರಾಜೇಗೌಡ ಏಕೆ ಭೇಟಿಯಾಗಿದ್ದರಂತೆ ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕುತೂಹಲ ಮೂಡಿಸಿದ್ದಾರೆ.
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ದೇವರಾಜೇಗೌಡನಿಗೆ 5ಜಿಬಿ ಸಾಮರ್ಥ್ಯದ ವಿಡಿಯೋ ಕೊಟ್ಟಿದ್ದೇನೆ ಎಂದು ಚಾಲಕ ಕಾರ್ತಿಕ್ ಹೇಳಿದ್ದಾನೆ. ಅದರಂತೆ ಕೊಟ್ಟಿರುವಷ್ಟು ವಿಡಿಯೋ ಮಾತ್ರ ಬಿಡುಗಡೆಯಾಗಿದೆ. ನಾನೇ ಬಿಟ್ಟಿದ್ದರೆ ಇನ್ನು ಹೆಚ್ಚು ವಿಡಿಯೋ ಬಿಡುಗಡೆಯಾಗುತ್ತಿತ್ತು ಎಂದಿದ್ದಾನೆ. ಈ ನಡುವೆ ಎಚ್‌ಡಿಕೆ ದೇವರಾಜೇಗೌಡ ಏಕೆ ಭೇಟಿಯಾಗಿದ್ದರು. ತನಿಖೆಯಲ್ಲಿ ಗೊತ್ತಾಗಲಿದೆ ಬಿಡಿ ಎಂದು ಹೇಳಿದರು.
    ಕಾಂಗ್ರೆಸ್ ಹಾಗೂ ಡಿಸಿಎಂ ಡಿಕೆಶಿ ವಿರುದ್ದ ಜೆಡಿಎಸ್‌ನವರು ಯಾವ ಸಾಧನೆಗೆ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಮಹಿಳೆ ಮಾನ ತೆಗೆದವರು ಯಾರು?. ಈ ಘಟನೆ ನಡೆದಿರುವುದಕ್ಕೆ ಯಾರ ಕುಟುಂಬ ಕಾರಣ?. ತಮ್ಮ ಹುಡುಗ ಮಾಡಿದ್ದು ಸರಿಯಿದೆ ಎನ್ನುವ ಸಂತೋಷಕ್ಕೆ ಮಾಡುತ್ತಿದ್ದಾರೆಯೇ?. ಇಷ್ಟೊಂದು ಕುಟುಂಬ ಇಂದು ಬೀದಿಗೆ ಬಂದಿದೆ. ಪಕ್ಕದ ಮನೆ ಮದುವೆಗೆ ಹೋಗಲು ಯೋಚಿಸುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡಲಾಗದ ಸ್ಥಿತಿ ಇದೆ. ಮಾಜಿ ಮುಖ್ಯಮಂತ್ರಿಯಾಗಿ ಹಾದಿ ಬೀದಿ ರಂಪಾಟ ಮಾಡುತ್ತಿರುವುದು ಎಷ್ಟು ಸರಿ. ಇದರ ಬಗ್ಗೆ ಮಾತನಾಡುವುದಕ್ಕೆ ನಮಗೆ ಮುಜುಗರ ಆಗುತ್ತಿದೆ ಎಂದು ಎಚ್‌ಡಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
    ರೇವಣ್ಣ ಕುಟುಂಬ, ನನ್ನ ಕುಟುಂಬ ಬೇರೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಹೌದಾ ಇವಾಗ ಯಾರ ಪರ ಪ್ರತಿಭಟನೆ ಮಾಡ್ತಿದ್ದಾರೆ?. ಸಂತ್ರಸ್ಥ ಹೆಣ್ಣುಮಕ್ಕಳ ಬಗ್ಗೆ ಅನುಕಂಪ ತೋರಲಿಲ್ಲ. ಅವರಲ್ಲಿ ಕ್ಷಮೆ ಕೂಡ ಕೇಳಲಿಲ್ಲ. ಅನ್ಯಾಯ ಆದವರಿಗೆ ನಿಮ್ಮ ಪರ ಇದ್ದೀವಿ ಎನ್ನಲಿಲ್ಲ. ಪ್ರಜ್ವಲ್ನ ಕರೆಸುವ ಜವಾಬ್ದಾರಿ ಯಾರದು?. ಆರೋಪಿ ಹೋದರೆ ಅವರಪ್ಪ, ಅಣ್ಣನನ್ನ ಕರೆಸಿ ಕೂರಿಸುತ್ತೀರಾ. ಕುಮಾರಸ್ವಾಮಿಯೇ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ನ ಕರೆಸಬೇಕಲ್ವವೇ?. ಪ್ರಜ್ವಲ್ ಕುಮಾರಸ್ವಾಮಿಯ ಅಣ್ಣನ ಮಗ. ಪೆನ್‌ಡ್ರೈವ್ ಎಲ್ಲಿಂದ ಬಂತು. ವಿಡಿಯೋ ಮಾಡಿದವರು ಯಾರು. ಸಂತ್ರಸ್ತರನ್ನ ಬೀದಿಗೆ ತಂದವರು ಯಾರು?. ಡಿ.ಕೆ.ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ. ಅವರ ಬಳಿ ಸಂತ್ರಸ್ಥರು, ಸಂತ್ರಸ್ಥರ ಪರ ಇರುವವರು ಭೇಟಿ ಮಾಡಿ ಮಾಹಿತಿ ನೀಡಿ ಚರ್ಚೆ ಮಾಡಿದರೆ ತಪ್ಪೇನೂ?. ಚರ್ಚೆ ಮಾಡುವುದು ಅಪರಾಧನಾ. ತನಿಖೆ ಆಗುವವರೆಗೂ ಕಾಯುವ ತಾಳ್ಮೆ ಜೆಡಿಎಸ್‌ನವರಿಗೆ ಇಲ್ಲ ಎಂದು ಟೀಕಿಸಿದರು.
    ಕರ್ನಾಟಕದ ತನಿಖೆ ಸಂಸ್ಥೆಯಿಂದ ರಾಜ್ಯದ ಹಲವು ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿದೆ. ಸಿಬಿಐ ಮಾಡಿದ ತನಿಖೆಗಳೆಲ್ಲ ಕ್ಲೀನ್‌ಚೀಟ್ ಆಗಿವೆ, ಇಲ್ಲ ಮೂಲೆ ಸೇರಿವೆ. ಈ ಹಿಂದೆ ಕುಮಾರಸ್ವಾಮಿಯೇ ರಾಜ್ಯದ ಪೊಲೀಸರನ್ನ ಸಮರ್ಥರು, ದಕ್ಷರು ಎಂದಿದ್ದಾರೆ. ಎಚ್ಡಿಕೆಗೆ ಅಭದ್ರತೆ ಕಾಡುತ್ತಿದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಆಗುತ್ತಿದ್ದಾರೆ. ಕುಮಾರಸ್ವಾಮಿ ಇಗ ಚಲುವರಾಯಸ್ವಾಮಿ ಯಾವನು ಎನ್ನುತಾರೆ. ಇದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದವರು. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 136 ಸೀಟು ಗೆಲ್ಲಿಸಿ ಸರ್ಕಾರ ತಂದಿದ್ದಾರೆ. ಇಲ್ಲಿವರೆಗೆ ದೇವೇಗೌಡರು ಜೆಡಿಎಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದಿದ್ದರು. ಅದನ್ನ ಮುಂದುರೆಸಲು ಆಗದೆ ಬಿಜೆಪಿ ಜತೆ ಮೈತ್ರಿಯಾಗಿದ್ದಾರೆ. ಮೈತ್ರಿಯಲ್ಲಿ ಈ ವಿಚಾರದಿಂದ ಗೊಂದಲ ಸೃಷ್ಟಿಯಾಗಿದೆ. ಈ ವೇಳೆ ಶಿವಕುಮಾರ್ ವಿರುದ್ಧ ಮಾತಾಡುವುದರಿಂದ ಅವರ ವ್ಯಕ್ತಿತ್ವವನ್ನ ಅಲ್ಲಾಡಿಸಬಹುದು, ಈ ವಿಷಯ ದಿಕ್ಕು ತಪ್ಪಿಸಬಹುದೆಂದು ಯೋಚನೆ ಇರಬಹುದು ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts