ನಾಗಮಂಗಲ: ಯುವಕನನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು 24 ಗಂಟೆಗಳಲ್ಲೇ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಟಿ.ಬಿ.ಬಡಾವಣೆಯ ಸುಭಾಷ್ ನಗರದ ಮಂಜುನಾಥ್ ಅಲಿಯಾಸ್ ಡಿಂಗ್ರಿ ಮಂಜು(25) ಹತ್ಯೆಯಾದ ಯುವಕ. ಕೊಲೆ ಮಾಡಿದ್ದ ಇದೇ ಬಡಾವಣೆಯ ಆನಂದ್ (33) ಬಂಧಿತ ಆರೋಪಿ.
ಮಂಜುನಾಥ್ ಹಾಗೂ ಆನಂದ್ ಸಂಬಂಧಿಕರಾಗಿದ್ದು, ಮಂಜುನಾಥ್ ಮದ್ಯ ಕುಡಿಯಲು ಹಣ ನೀಡುವಂತೆ ಆನಂದ್ನನ್ನು ಪ್ರತಿನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಏ.1ರಂದು ಮಧ್ಯರಾತ್ರಿ 12.20ರಲ್ಲಿ ಅಳುತ್ತಿದ್ದ ತಮ್ಮ ಮಗುವನ್ನು ಆನಂದ್ ಮತ್ತು ಪತ್ನಿ ನೇತ್ರಾವತಿ ಸಮಾಧಾನಪಡಿಸುತ್ತಿದ್ದರು. ಈ ವೇಳೆ ಮದ್ಯ ಸೇವಿಸಿ ಬಂದ ಮಂಜುನಾಥ್, ಏಕಾಏಕಿ ಆನಂದ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಭಾವ ಎಣ್ಣೆ ಕೊಡಿಸು ಎಂದು ಕೇಳಿದ. ಇದರಿಂದ ಕೋಪಗೊಂಡ ಆನಂದ್ ಮನೆಯಲ್ಲಿ ಇಟ್ಟಿದ್ದ ಭರ್ಜಿಯನ್ನು ತೆಗೆದುಕೊಂಡು ಮಂಜುನಾಥ್ ಎದೆ ಮತ್ತು ಬೆನ್ನಿನ ಭಾಗಕ್ಕೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಏ.2ರಂದು ಬೆಳಗ್ಗೆ 6.30ರಲ್ಲಿ ಭದ್ರಾವತಿಯಿಂದ ಬೆಳ್ಳೂರು ಕ್ರಾಸ್ಗೆ ಸಾರಿಗೆ ಬಸ್ನಲ್ಲಿ ಆರೋಪಿ ಆನಂದ್ ಬರುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿ ಬಸ್ನಿಂದ ಇಳಿಯುತ್ತಿದ್ದಂತೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೊಲೆ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾದ ನಾಗಮಂಗಲ ಪಟ್ಟಣ ಠಾಣೆ ಪೊಲೀಸರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.