ಹುಬ್ಬಳ್ಳಿ: ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು ನಗರ ಬದುಕು ಅಕ್ಷರಃಶ ಮೂರಾಬಟ್ಟೆಯಾಗಿದೆ. ಊರಿಗೆ ಊರೇ ಕೊಚ್ಚಿಕೊಂಡು ಹೋಗುತ್ತಿದೆ… ಸೂರು ಕಳೆದುಕೊಂಡ ಜನ ಬೀದಿಗೆ ಬಿದ್ದಿದ್ದಾರೆ. ಆದ್ರೆ ಈ ಸಾಹೇಬ್ರಿಗೆ ಮಾತ್ರ ಟೆನ್ಶನ್ನೇ ಇಲ್ಲ…
ಇಂತಹದ್ದೊಂದು ಆಕ್ರೋಶ, ಎಸಿ ರೂಮಲ್ಲಿ ಕೂತು ಐಪಿಎಲ್ ಮ್ಯಾಚ್ ನೋಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತಾಗಿ ಎದ್ದಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯರ ಕ್ಷೇತ್ರ ಬಾದಾಮಿಯಲ್ಲಿ ಅತಿವೃಷ್ಠಿ ಉಂಟಾಗಿದೆ. ಸುಮಾರು 400 ಮನೆಗಳು ನೆಲಸಮವಾಗಿದ್ದು, 4000 ಹೆಕ್ಟೇರ್ ಕೃಷಿಭೂಮಿ ಜಲಾವೃತಗೊಂಡಿದೆ. ಮೊನ್ನೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯ ನಿನ್ನೆ(ಮಂಗಳವಾರ) ರಾತ್ರಿ ಬಾದಾಮಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡ ಸಿದ್ದರಾಮಯ್ಯ, ಪಂಜಾಬ್ ಮತ್ತು ದೆಹಲಿ ತಂಡದ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡುವುದರಲ್ಲಿ ಫುಲ್ ಬಿಜಿಯಾಗಿದ್ದರು.
ಸಿದ್ದರಾಮಯ್ಯ ಕ್ರಿಕೆಟ್ ನೋಡುತ್ತ ಕುಳಿತಿದ್ದ ದೃಶ್ಯ ವೈರಲ್ ಆಗಿದ್ದು, ಜನರ ಗೋಳಾಟಕ್ಕಿಂತ ಮ್ಯಾಚ್ ಹೆಚ್ಚಾಯ್ತಾ? ಜನರ ಕಷ್ಟಕ್ಕೆ ಸ್ಪಂದಿಸಿ ಪರಿಹಾರದ ನಿಟ್ಟಿನಲ್ಲಿ ಚಿಂತನೆಯೇ ಇಲ್ವಾ? ಮ್ಯಾಚ್ ನೋಡಲು ಕೊಟ್ಟ ಸಮಯವನ್ನು ಸಂತ್ರಸ್ತರಿಗೆ ನೀಡಿದ್ದರೆ ಅವರಲ್ಲೂ ಧೈರ್ಯ- ಮನೋಬಲ ಹೆಚ್ಚುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ.