ಹನುಮಸಾಗರ: ಜಾನುವಾರುಗಳನ್ನು ಸಾಕಲು ರೈತರ ಅನುಕೂಲಕ್ಕಾಗಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಹೇಳಿದರು.
ತಾಲೂಕಿನಲ್ಲಿರುವ ಪರಿಸ್ಥಿತಿ ಸರ್ಕಾರಕ್ಕೆ ವರದಿ ಕಳುಹಿಸಿ
ಪಟ್ಟಣದ ಎಪಿಎಂಸಿಗೆ ಭೇಟಿ ನೀಡಿದಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸನ್ಮಾನ ಸ್ವೀಕರಿಸಿ ಬುಧವಾರ ಮಾತನಾಡಿದರು. ಮಳೆ ಕೊರತೆಯಿಂದ ರೈತರು ಮೇವಿಗಾಗಿ ಪರದಾಡುತ್ತಿದ್ದು, ತಾಲೂಕಿನಲ್ಲಿರುವ ಪರಿಸ್ಥಿತಿಯನ್ನು ದಾಖಲೆ ಸಮೇತ ಸರ್ಕಾರಕ್ಕೆ ವರದಿ ಕಳುಹಿಸಿಕೊಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಇಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಆರಂಭಿಸುವುದು ತುಂಬಾ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಒತ್ತಾಯ: ಉಪ ತಸೀಲ್ದಾರ್ ರೇಣುಕಾಗೆ ಮನವಿ
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು
ರೈತ ಸಂಘದ ಸ್ಥಳೀಯ ಅಧ್ಯಕ್ಷ ಯಮನೂರಪ್ಪ ಮಡಿವಾಳರ ಮಾತನಾಡಿ, ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಸರಿಯಾಗಿ ಮಳೆಯಿಲ್ಲದೆ ರೈತರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಮೇವಿನ ಕೊರತೆಯಿಂದಾಗಿ ಜಾನುವಾರುಗಳನ್ನು ಮಾರುವಂತಹ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಕುಷ್ಟಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಹೋಬಳಿ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆ ಆರಂಭಿಸುವಂತೆ ಶಾಸಕರು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು, ರೈತ ಸಂಘದ ಮಾಜಿ ಅಧ್ಯಕ್ಷ ಮುತ್ತಣ್ಣ ಹಲಕೋಲಿ, ರೈತ ಸಂಘದ ಕಾರ್ಯದರ್ಶಿ ಉಮೇಶ ಬಾಚಲಾಪುರ, ಮುತ್ತಣ್ಣ ಕಟಗಿ, ಅಮ್ಮದ ಮುದ್ಗಲ್ಲ, ಶರಣಪ್ಪ ಜಿಗಳೂರ, ನಾಗರಾರ ಮುಳುಗುಂದ, ಶಿವಕಾಂತಪ್ಪ ಹಾದಿಮನಿ, ಇಸ್ಮೈಲ್ಸಾಬ ತಹಸೀಲ್ದಾರ್, ಪರಸಪ್ಪ ಜಿಗಳೂರು, ಮಲ್ಲಪ್ಪ ಪಟ್ಟಣಶೆಟ್ಟಿ, ವೀರಬಸಪ್ಪ ಪಟ್ಟಣಶೆಟ್ಟಿ, ವೀರೇಶ ಕಟಗಿ ಇತರರಿದ್ದರು.