ಯಾದಗಿರಿ: ಕೋವಿಡ್-19 ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದರೂ ಆಸ್ಪತ್ರೆಯಲ್ಲಿ ಸೂಕ್ತ ಸ್ಪಂದನೆ ಸಿಗದೆ ವ್ಯಕ್ತಿಯೊಬ್ಬರು ಗಂಟೆಗಟ್ಟಲೆ ನರಳಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದು ಹೇಳಿದ ಸಿಬ್ಬಂದಿ, ಸೋಂಕಿತನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
ಯಾದಗಿರಿಯ ಹೊಸ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಇಂಥದ್ದೊಂದು ಕರುಳು ಚುರುಕ್ ಎನಿಸುವಂಥ ಪ್ರಕರಣ ನಡೆದಿದೆ. ಕಂದಕೂರ ಗ್ರಾಮದ ನಿವಾಸಿ ಭೀಮೇಶ್ ಎಂಬವರು ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತ ಸಹೋದರಿಯೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಬೆಡ್ ಇಲ್ಲ ಎಂದು ಹೇಳಿದ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಉಸಿರಾಡಲು ಆಗದೆ ನರಳುತ್ತಿದ್ದರೂ ಏನೂ ಸಮಸ್ಯೆ ಇಲ್ಲ ಹೋಗಿ ಎಂದೇ ವೈದ್ಯರು ಸಾಗಹಾಕಲು ಯತ್ನಿಸುತ್ತಿದ್ದರು ಎಂದು ರೋಗಿಯ ಸಹೋದರಿ ಹೇಳಿದ್ದಾರೆ. ಹೆಚ್ಚು ಕೇಳಿದರೆ, ಡಾಕ್ಟರ್ ನಾನಾ ನೀನಾ ಎಂದು ಹೇಳುತ್ತಾರೆ ಎಂಬುದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!
ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ತೊಂದರೆಯಿಂದ ಈ ವ್ಯಕ್ತಿ ನರಳಾಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸದಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ನರಳಾಟದ ದೃಶ್ಯ ಮರುಕ ಹುಟ್ಟಿಸುವಂತಿದೆ. ಈ ಆಸ್ಪತ್ರೆಯಲ್ಲಿ ಉಳ್ಳವರು ಬಂದರೆ ದಾಖಲಿಸಿಕೊಳ್ಳುತ್ತಾರೆ, ಬಡವರು ಬಂದರೆ ಹೋಮ್ ಕ್ವಾರಂಟೈನ್ಗೆ ಸೂಚಿಸುತ್ತಾರೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ. ರೋಗಿಯ ನರಳಾಟವನ್ನು ಕಂಡವರು ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಪ್ರತಿಕ್ರಿಯಿಸಿದ ಆಸ್ಪತ್ರೆ ಸಿಬ್ಬಂದಿ ನಂತರ ಆ ರೋಗಿಯನ್ನು ದಾಖಲಿಸಿಕೊಂಡಿದ್ದಾರೆ.
ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!
ಕರೊನಾ ಎರಡನೇ ಅಲೆಯಲ್ಲಿ ಈ ಏಳು ರಾಜ್ಯಗಳೇ ದೊಡ್ಡ ಹಾಟ್ಸ್ಪಾಟ್!