ತಾವರಗೇರಾ: ಪಟ್ಟಣದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಹೋಗದ ಸೋಂಕಿತರ ಮನೆಗಳಿಗೆ ಪಪಂನಿಂದ ಪಿಂಕ್ ರಿಬ್ಬನ್ ಕಟ್ಟಲಾಗುತ್ತಿದೆ. ಈ ಮೂಲಕ ಸೋಂಕಿತರು ಹೊರಗೆ ಬರದಂತೆ ಹಾಗೂ ನಿರ್ದಿಷ್ಟ ಮನೆಯಲ್ಲಿ ಸೋಂಕಿತರು ಇದ್ದಾರೆ ಎಂಬ ಸಂದೇಶ ಸಾರಲಾಗುತ್ತಿದೆ.
ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಿರ್ಬಂಧಿಸಲಾಗಿದ್ದು, ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗುವಂತೆ ಸೋಂಕಿತರಿಗೆ ಸೂಚಿಸಲಾಗಿದೆ. ಆದರೂ, ಕೆಲವು ಸೋಂಕಿತರು ಆರೈಕೆ ಕೇಂದ್ರಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಪಂ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಗುರುವಾರ ನಾಲ್ವರು ಸೋಂಕಿತರ ಮನೆಗಳಿಗೆ ಪಿಂಕ್ ರಿಬ್ಬನ್ ಕಟ್ಟಿದರು.
ಪಟ್ಟಣದಲ್ಲಿ ಮೇ 6 ರಿಂದ 27ರವರೆಗೆ 74 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 47 ಜನರು ಚೇತರಿಸಿಕೊಂಡಿದ್ದು, ನಾಲ್ಕು ಜನ ಸೋಂಕಿತರು ಮೃತಪಟ್ಟಿದ್ದಾರೆ. ಬಾಕಿ 23 ಸೊಂಕಿತರ ಪೈಕಿ ಕೆಲವರು ಕೋವಿಡ್ ಕೇರ್ ಕೇಂದ್ರದಲ್ಲಿದ್ದರೆ ಇನ್ನು ಕೆಲವರು ಹೋಂ ಐಸೋಲೇಷನ್ನಲ್ಲಿ ಇದ್ದಾರೆ.
ಸೋಂಕಿತರು ಕಡ್ಡಾಯವಾಗಿ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆರೈಕೆ ಕೇಂದ್ರಕ್ಕೆ ಹೋಗದ ಸೋಂಕಿತರ ಮನೆಗಳಿಗೆ ರಿಬ್ಬನ್ ಕಟ್ಟಲಾಗುತ್ತಿದೆ.
| ಶಂಕರ್ ಡಿ.ಕಾಳೆ ಪಪಂ ಮುಖ್ಯಾಧಿಕಾರಿ