ನವದೆಹಲಿ: ಗಣೇಶ ಚತುರ್ಥಿ ಸಂದರ್ಭದಲ್ಲಿ ಆಯಾ ಕಾಲದ ಟ್ರೆಂಡ್ಗೆ ತಕ್ಕಂತೆ ಗಣೇಶನ ವಿಗ್ರಹಗಳು ರೂಪುಗೊಳ್ಳುವಂತೆ ಇದೀಗ ದಸರಾ ಸಂದರ್ಭದಲ್ಲೂ ನಡೆಯಲಾರಂಭಿಸಿದೆ. ನವರಾತ್ರಿ ಪ್ರಯುಕ್ತ ಭಕ್ತರು ಮಹಿಷಾಸುರನ ಬದಲು ಕರೊನಾಸುರನನ್ನೇ ಸಂಹರಿಸುವ ದೇವಿಯನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಆ ಮೂಲಕ ಕರೊನಾ ಸೋಂಕನ್ನು ಬೇಗ ತೊಲಗಿಸುವ ಉದ್ದೇಶ ಹೊಂದಿದ್ದಾರೆ.
ದೆಹಲಿಯ ಸಫ್ದರ್ಜಂಗ್ನ ಮಾತ್ರಿ ಮಂದಿರದ ಹಳೇ ಪೂಜಾ ಸಮಿತಿಯು ಈ ಸಲ ಮಹಿಷಾಸುರನ ಬದಲು ಕರೊನಾಸುರನನ್ನು ಸ್ಥಾಪಿಸಲು ನಿರ್ಧರಿಸಿದೆ. ಪ್ರತಿವರ್ಷ ನಾವು ಮಹಿಷಾಸುರನನ್ನು ಮರ್ದಿಸುವ ದುರ್ಗೆಯನ್ನು ಪ್ರತಿಷ್ಠಾಪಿಸುತ್ತಿದ್ದೆವು. ಆದರೆ ಈ ಸಲ ಮಹಿಷಾಸುರನ ಬದಲು ಕರೊನಾಸುರನನ್ನು ಮರ್ದಿಸುವ ದುರ್ಗೆಯನ್ನು ಪ್ರತಿಷ್ಠಾಪಿಸಲಿದ್ದೇವೆ ಎಂಬುದಾಗಿ ಆಯೋಜಕರಲ್ಲಿ ಒಬ್ಬರಾಗಿರುವ ಸುಮಿತ್ ಗುಹಾ ತಿಳಿಸಿದ್ದಾರೆ. ಕೋಲ್ಕತದಲ್ಲಿ ಕೂಡ ಮಹಿಷಾಸುರನ ಬದಲು ಕರೊನಾಸುರನನ್ನು ಮರ್ದಿಸುವ ದುರ್ಗೆಯನ್ನು ಕಲಾವಿದರೊಬ್ಬರು ರೂಪಿಸಿದ್ದಾರೆ. (ಏಜೆನ್ಸೀಸ್)