ಗುವಾಹಟಿ: ಕರೊನಾ ವೈರಸ್ಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಔಷಧಿಯಾಗಲಿ, ಲಸಿಕೆಯಾಗಿ ಇಲ್ಲ. ಸದ್ಯ ವೈದ್ಯರು ಸೋಂಕಿತರಿಗೆ ಆ್ಯಂಟಿ ಮಲೇರಿಯಾ, ಆ್ಯಂಟಿ ಎಚ್ಐವಿ ಲಸಿಕೆಗಳನ್ನೇ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರು ಮಾಡಿಕೊಂಡ ಅಚಾತುರ್ಯದಿಂದ ಅವರ ಜೀವವೇ ಹೋಗಿದೆ.
ಆಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯೊಂದರ ಹಿರಿಯ ಅರಿವಳಿಕೆ ತಜ್ಞ ಉತ್ಪಾಲ್ಜಿತ್ ಬರ್ಮನ್(44) ಅವರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಆ್ಯಂಟಿ ಮಲೇರಿಯಾ ಔಷಧಿಯಾದ ಹೈಡ್ರಾಕ್ಸಿಕ್ಲೋರೋಕ್ವಿನ್ನ್ನು ಸೇವಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕರೊನಾ ಇಲ್ಲದಿದ್ದರೂ ಅದಕ್ಕೆ ಔಷಧಿ ತೆಗೆದುಕೊಂಡ ಬಳಿಕ ವೈದ್ಯರು ಸ್ವಲ್ಪ ಮಟ್ಟಿಗೆ ಅಸ್ವಸ್ಥರಾಗಿದ್ದರು. ಈ ಬಗ್ಗೆ ತಮ್ಮ ಸಹೋದ್ಯೋಗಿಯೋರ್ವರಿಗೆ ವಾಟ್ಸ್ಆ್ಯಪ್ ಮೆಸೇಜ್ನಲ್ಲಿ ತಿಳಿಸಿದ್ದರು. ಆದರೆ ಮೃತಪಟ್ಟಿದ್ದು ಹೃದಯಾಘಾತದಿಂದ ಎಂದು ವರದಿ ಬಂದಿದೆ. ಔಷಧವೇ ಹೃದಯಾಘಾತಕ್ಕೆ ಕಾರಣವಾಯಿತಾ ಎಂಬ ಬಗ್ಗೆ ಸ್ಪಷ್ಟ ವರದಿ ಬಂದಿಲ್ಲ.
ಮೃತ ಡಾ. ಬರ್ಮನ್ ಅವರು ಯಾವುದೇ ಕರೊನಾ ಸೋಂಕಿತರಿಗೂ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಸಾಂನಲ್ಲಿ ಇದುವರೆಗೂ ಕರೊನಾ ವೈರಸ್ ಪತ್ತೆಯಾಗಿಲ್ಲ. ಹೀಗಿರುವಾಗ ಸುಮ್ಮನೆ ತೆಗೆದುಕೊಂಡಿದ್ದರು. ಔಷಧಿ ಸೇವನೆ ಬಳಿಕ ತೀವ್ರ ತೊಂದರೆ ಅನುಭವಿಸಿದ ಅವರು ಆತಂಕಕ್ಕೀಡಾಗಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೊವಿಡ್ ಬಾರದಂತೆ ಸ್ವಯಂ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಔಷಧವನ್ನು ತೆಗೆದುಕೊಳ್ಳಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್)