More

    ಅಪ್ರಾಪ್ತೆ ಸಂಬಂಧಿಗಳಿಂದಲೇ ಜೋಡಿ ಕೊಲೆ : ಬೇವಿನಮಟ್ಟಿಯಲ್ಲಿ ಮರ್ಯಾದಾ ಹತ್ಯೆ

    ಬಾಗಲಕೋಟೆ: ಬುದ್ಧಿ ಹೇಳಿದರೂ ಅನ್ಯ ಜಾತಿ ಹುಡುಗನ ಜತೆಗಿನ ಪ್ರೀತಿಯಿಂದ ಹೊರ ಬಾರದ್ದಕ್ಕೆ ಹುಡುಗಿಯ ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ ನದಿಗೆ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಮರ್ಯಾದೆಗೆ ಹೆದರಿ ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದ ಪ್ರೇಮಿಗಳನ್ನು ಹತ್ಯೆ ಮಾಡಿದ್ದು, 15 ದಿನಗಳ ಬಳಿಕ ಪ್ರಕರಣ ಪತ್ತೆಯಾಗಿದೆ.

    ಬೇವಿನಮಟ್ಟಿ ಗ್ರಾಮದ ಒಂದು ಜಾತಿಯ ಅಪ್ರಾಪ್ತ (17 ವರ್ಷ 3 ತಿಂಗಳು) ಹುಡುಗಿ ಹಾಗೂ ಅದೇ ಗ್ರಾಮದ ವಿಶ್ವನಾಥ ನೆಲಗಿ (24) ಕೊಲೆಯಾಗಿದ್ದಾರೆ. ಕೊಲೆಯಾದ ಪ್ರೇಮಿಗಳ ಶವ ಇನ್ನೂ ಸಿಕ್ಕಿಲ್ಲ. ಅಪ್ರಾಪ್ತೆಯ ಸಹೋದರ ರವಿ ಹುಲ್ಲಣ್ಣವರ (ಚಿಕ್ಕಮ್ಮಳ ಮಗ), ಮಾವಂದಿರಾದ ಹನುಮಂತ, ಬೀರಪ್ಪ ಎನ್ನುವವರನ್ನು ಬಂಧಿಸಲಾಗಿದೆ. ಉಳಿದಂತೆ ಬಾಗಪ್ಪ, ಬಸಪ್ಪ, ಧರೆಪ್ಪ ಅವರ ಹುಡುಕಾಟ ನಡೆಸಿದ್ದಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದ್ದಾರೆ.

    ಪ್ರೀತಿಯ ಬಲೆಯಿಂದ ಮಗಳು ಹೊರಬರಲ್ಲ ಎಂದು ಗೊತ್ತಾದ ಬಳಿಕ ದುಷ್ಕರ್ಮಿಗಳು ಕೊಲೆಮಾಡುವ ಸಂಚು ರೂಪಿಸಿದ್ದಾರೆ. ಪ್ರೇಮಿ ಜೊತೆಗೆ ಮದುವೆಮಾಡುವುದಾಗಿ ನಂಬಿಸಿ ಅಪ್ರಾಪ್ತೆ ಮೂಲಕ ಯುವಕನನ್ನು ಕರೆಯಿಸಿದ್ದಾರೆ. ಎರಡು ಪ್ರತ್ಯೇಕ ವಾಹನದಲ್ಲಿ ಇಬ್ಬರನ್ನು ಕರೆದುಕೊಂಡು ಹೋಗಿ ದಾರಿ ಮಧ್ಯೆ ವಾಹನದಲ್ಲೇ ಭೀಕರವಾಗಿ ಹತ್ಯೆ ಮಾಡಿ ಅವರ ಶವಗಳನ್ನು ಆಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿರುವುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

    ಪ್ರಕರಣ ಪತ್ತೆ ಆಗಿದ್ದೇಗೆ?
    ಮಗಳು ಕಿಡ್ನಾೃಪ್ ಆಗಿದ್ದಾಳೆ ಎಂದು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪರಸಪ್ಪ ಅಕ್ಟೋಬರ್ 7ರಂದು ದೂರು ನೀಡಿದ್ದಾನೆ. ಅತ್ತ ನರಗುಂದ ಬಸ್ ನಿಲ್ದಾಣದಲ್ಲಿ ವಿಶ್ವನಾಥನ ಬ್ಯಾಗ್ ಬಿದ್ದಿದ್ದರಿಂದ ಅಲ್ಲಿನ ಪೊಲೀಸರು ತಪಾಸಣೆ ಮಾಡಿದಾಗ ಕೆಲ ನಂಬರ್‌ಗಳು ಲಭ್ಯವಾಗಿವೆ. ಯುವಕನ ತಂಗಿಗೆ ಫೋನ್ ಮಾಡಿದಾಗ ಅವರು ಅಲ್ಲಿಗೆ ಹೋಗಿ ಕಾಣೆ ಆಗಿದ್ದಾನೆಂದು ಯುವಕನ ತಾಯಿ ದೂರು ನೀಡಿದ್ದರು.
    ಪ್ರಕರಣ ಬೆನ್ನತ್ತಿದ ಬಾಗಲಕೋಟೆ ಪೊಲೀಸರಿಗೆ ಇಬ್ಬರನ್ನು ಕೊಲೆ ಮಾಡಿರುವ ಸಂಶಯ ಬಂದಿದ್ದು, ವಾಹನ ಚಾಲಕ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರಿಂದ ಪ್ರಕರಣ ಸಂಪೂರ್ಣ ಬೆಳಕಿಗೆ ಬಂದಿದೆ. ಕೆಳವರ್ಗದ ಯುವಕ ಜತೆ ಮದುವೆಯಾಗುವುದಾಗಿ ಹಠ ಹಿಡಿದಿದ್ದ ಮಗಳ ವರ್ತನೆಯಿಂದ ಮನೆತನದ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ ಆಕೆಯ ತಂದೆ ಕೊಲೆಯ ಸಂಚು ರೂಪಿಸಿದ್ದನೆಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts