ನವದಹೆಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಉಗ್ರ ಕೃತ್ಯಕ್ಕೆ ರೂಪಿಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಗುಂಡಿನ ಚಕಮಕಿ ನಡೆಸಿ ಐಸಿಎಸ್ ಸಂಪರ್ಕದಲ್ಲಿದ್ದ ಉಗ್ರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಐಸಿಸ್ ಉಗ್ರರ ಅಣತಿಯ ಮೇರೆಗೆ ರಾಜಧಾನಿಯ ಜನನಿಬಿಡ ಭಾರಿ ಸ್ಫೋಟಕ್ಕೆ ಬಳಸಲೆಂದು ಇಟ್ಟಿದ್ದ ಎರಡು ಪ್ರಷರ್ ಕುಕ್ಕರ್ನಲ್ಲಿ ಅಳವಡಿಸಿದ್ದ ಸುಧಾರಿತ ಸ್ಫೋಟಕಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ
ಬಂಧಿತ ಮೊಹಮ್ಮದ್ ಮುಷ್ತಕೀನ್ ಖಾನ್ ಅಲಿಯಾಸ್ ಯೂಸೂಫ್, ಅಲಿಯಾಸ್ ಅಬು ಯೂಸೂಫ್ ಸಾಮಾಜಿಕ ಜಾಲತಾಣದ ಮೂಲಕ ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಆಫ್ ಖೋರಾಸನ್ ಪ್ರಾವಿನ್ಸ್ ಕಮಾಂಡರ್ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಎಂದು ವಿಶಷ ಪೊಲೀಸ್ ವಿಭಾಗದ ಸಹಾಯಕ ಆಯುಕ್ತ ಪ್ರಮೋದ್ ಖುಷ್ವಾಹ ತಿಳಿಸಿದ್ದಾರೆ. ದೆಹಲಿಯ ಕರೋಲ್ ಬಾಗ್- ದೌಲಾಖಾನ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ಸಣ್ಣ ಗುಂಡಿನ ಚಕಮಕಿಯಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಪ್ರೆಷರ್ ಕುಕ್ಕರ್ನಲ್ಲಿ ಅಳವಡಿಸಲಾಗಿದ್ದ ಬಾಂಬ್ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
36 ವರ್ಷದ ಖಾನ್ ಉತ್ತರಪ್ರದೇಶದ ಬಲರಾಮ್ಪುರ್ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಐಸಿಸ್ನ ನೇರ ಸಂಪರ್ಕದಲ್ಲಿದ್ದಾನೆ. ಐಸಿಸ್ ಯೂಸುಫ್ ಅಲ್ಹಿಂದಿ ಎಂಬುವನ ನಿಗಾದಲ್ಲಿದ್ದ. ಆತ ಕಳೆದ ವರ್ಷ ಸಿರಿಯಾದಲ್ಲಿ ಹತ್ಯೆಗೀಡಾದ ಬಳಿಕ ಅಬು ಹುಝಫಾ ಎಂಬ ಪಾಕಿಸ್ತಾನಿ ಈತನನ್ನು ನಿರ್ವವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಅಲಂಕಾರಿಕ ವಸ್ತುಗಳ ಮಳಿಗೆ ಮಾಲೀಕನಾಗಿರುವ ಖಾನ್ನನ್ನು ಖೋರಾಸನ್ಗೆ ಕರೆಯಿಸಿಕೊಳ್ಳುವುದಾಗಿ ಅಬು ಹುಝಫಾ ಭರವಸೆ ನೀಡಿದ್ದ. ಈ ಕಾರಣಕ್ಕೆ ಖಾನ್ ಪತ್ನಿ ಹಾಗೂ ನಾಲ್ವರು ಮಕ್ಕಳ ಪಾಸ್ಪೋರ್ಟ್ ಮಾಡಿಸಿದ್ದ. ಈತನ ಸಂಪರ್ಕದಲ್ಲಿದ್ದಾಗಲೇ ಬಾಂಬ್ ತಯಾರಿಸುವುದನ್ನು ಕಲಿತಿದ್ದ ಎನ್ನಲಾಗಿದೆ. ಆತನ ಬಳಿ ಪತ್ತೆಯಾದ ಪ್ರೆಷರ್ ಕುಕರ್ ಸ್ಫೋಟಕಗಳನ್ನು ಆತನೇ ತಯಾರಿಸಿದ್ದೋ? ಅಥವಾ ಯಾರಾದರೂ ತಂದು ನೀಡಿದ್ದಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 15ರಂದು ದೆಹಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಮುಷ್ತಕೀನ್ ಖಾನ್ ಸಂಚು ರೂಪಿಸಿದ್ದ ಆದರೆ, ಭಾರಿ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದ ಕಾರಣ ಆತನ ಸಂಚು ಈಡೇರಲಿಲ್ಲ. ಉಗ್ರನ ಬಹುದೊಡ್ಡ ಕೃತ್ಯವನ್ನು ತಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.