ನವದೆಹಲಿ: ಡೆಡ್ಲಿ ಕರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. 7 ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ.
ಗುಜರಾತಿನ ಸೂರತ್ ಮೂಲದ 67 ವರ್ಷದ ವೃದ್ಧ ಕರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸಾವಿಗೀಡಾದ ಮೂರನೇ ಪ್ರಕರಣ ಇದಾಗಿದೆ. ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಮುನ್ನ ದೆಹಲಿ, ಜೈಪುರ ಮತ್ತಿ ಸೂರತ್ಗಳಲ್ಲಿ ಪ್ರಯಾಣ ಮಾಡಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆಯಷ್ಟೇ 56 ವರ್ಷದ ಮುಂಬೈ ಮಹಿಳೆ ಸಾವಿಗೀಡಾಗಿದ್ದರು. ಮಧ್ಯಾಹ್ನ ಬಿಹಾರ ರಾಜಧಾನಿ ಪಟನಾದಲ್ಲಿ 38 ವರ್ಷದ ಸೋಂಕಿತ ವ್ಯಕ್ತಿ ಹತರಾಗಿದ್ದರು.
ಬಿಹಾರದ ವ್ಯಕ್ತಿ ಶನಿವಾರ ಬೆಳಗ್ಗೆ ಪಟನಾದ ಆಲ್ ಇಂಡಿಯಾ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಆದರೆ ಸಾವಿನ ಬಗ್ಗೆ ಮಾಹಿತಿ ಖಚಿತವಾಗಿರಲಿಲ್ಲ. ಇದೀಗ ಕೋವಿಡ್ 19ನಿಂದಲೇ ಮೃತರಾಗಿರುವುದು ಧೃಡವಾಗಿದೆ. ಮೃತ ವ್ಯಕ್ತಿ ಕತಾರ್ನಿಂದ ಬಂದಿದ್ದ ಎಂದು ಟ್ರಾವೆಲ್ ಹಿಸ್ಟರಿಯಲ್ಲಿ ಬಹಿರಂಗವಾಗಿದೆ.
ಬೆಳಗ್ಗೆ ಮೃತರಾದ ಮುಂಬೈ ಮಹಿಳೆಯು ಎಚ್.ಎನ್. ರಿಲಯನ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ 19 ಸೋಂಕಿನಿಂದ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ.
ದೇಶದಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 8 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್)
PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…