ಬಳ್ಳಾರಿ: ಚೀನಾದಲ್ಲಿ ಮೃತ್ಯುಕೂಪ ನಿರ್ಮಿಸಿ ಜಾಗತಿಕವಾಗಿ ಅನೇಕರನ್ನು ಬಲಿ ಪಡೆದುಕೊಂಡು ಇದೀಗ ರಾಜ್ಯಕ್ಕೂ ಕಾಲಿಟ್ಟಿರುವ ಮಾರಕ ಕೊರೊನಾ ವೈರಸ್ ತಡೆಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಹಂಪಿ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರತಿ ವಿದೇಶಿ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ, ಅವರ ಪೂರ್ಣ ವಿಳಾಸವನ್ನು ಕಲೆ ಹಾಕಲಾಗುತ್ತಿದೆ.
ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಡಿ.ಭಾಸ್ಕರ್ ನೇತೃತ್ವದ ತಂಡದಿಂದ ಪ್ರವಾಸಿಗರ ತಪಾಸಣೆ ನಡೆಯುತ್ತಿದೆ. ಶೀತ, ಕೆಮ್ಮು ಹಾಗೂ ಜ್ವರ ಕಂಡು ಬಂದರೆ, ತಕ್ಷಣ ಅವರನ್ನು ಹೊಸಪೇಟೆ ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಇಷ್ಟೇ ಅಲ್ಲದೆ ಪ್ರತಿ ವಿದೇಶಿ ಪ್ರವಾಸಿಗರಿಗೆ ಉಚಿತ ಮಾಸ್ಕ್ ಕೊಟ್ಟು ಎಚ್ಚರದಿಂದರಲು ಸೂಚನೆ ನೀಡಲಾಗಿದ್ದು, ಈ ಕೆಲಸಕ್ಕಾಗಿ ಹಂಪಿಯಲ್ಲಿ ಪ್ರತ್ಯೇಕ ವೈದ್ಯರ ತಂಡ ಬೀಡು ಬಿಟ್ಟಿದೆ. (ಏಜೆನ್ಸೀಸ್)