ಬೆಂಗಳೂರು: ಕರೊನಾ ಮಟ್ಟಹಾಕುವ ಉದ್ದೇಶದಿಂದ ದೇಶಾದ್ಯಂತ ಜಾರಿ ಗೊಳಿಸಲಾಗಿರುವ ಲಾಕ್ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಅಡ್ಡಾಡುವವರನ್ನು ಬಂಧಿಸಿ ಜೈಲಿಗಟ್ಟಲು ಸರ್ಕಾರ ಮುಂದಾಗಿದೆ. ನಿರಂತರ ಮನವಿ, ಹಲವು ಎಚ್ಚರಿಕೆಗಳ ಹೊರತಾಗಿಯೂ ಹಲವೆಡೆ ಲಾಕ್ಡೌನ್ ಉಲ್ಲಂಘನೆ ಮುಂದುವರಿದಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಗುರುವಾರ ಜಿಲ್ಲಾಧಿಕಾರಿ ಗಳ ಜತೆಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಸಿಎಂ ಯಡಿಯೂರಪ್ಪ ಈ ಆದೇಶ ನೀಡಿದರು. ಪಾಸ್ ಹಾಗೂ ತುರ್ತು ಕೆಲಸ ಇರುವವರನ್ನು ಹೊರತುಪಡಿಸಿ ಉಳಿದವರು ಲಾಕ್ಡೌನ್ ಉಲ್ಲಂಘಿಸುವಂತಿಲ್ಲ. ಇಂತಹವರು ಕಂಡುಬಂದಲ್ಲಿ ಮುಲಾಜಿಲ್ಲದೆ ಬಂಧಿಸಬೇಕು. ಪ್ರಧಾನಮಂತ್ರಿ ಆದೇಶದ ಪ್ರಕಾರ 21 ದಿನಗಳ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಿಎಂ ತಾಕೀತು ಮಾಡಿದರು.
ಕೇರಳಿಗರ ಮೇಲೆ ನಿಗಾ: ಕೇರಳದಿಂದ ವಿಶೇಷವಾಗಿ ಕಾಸರ ಗೋಡು ಮೂಲಕ ಬರುವವರ ಮೇಲೆ ನಿಗಾವಹಿಸಬೇಕು. ಎಲ್ಲ ಜಿಲ್ಲೆಗಳ ಗಡಿ ಮುಚ್ಚಲು ಈಗಾಗಲೇ ಸೂಚಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಮಸೀದಿಯಲ್ಲಿ ಪ್ರಾರ್ಥನೆ ಇಲ್ಲ
ಕರೊನಾ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದು ಸೂಕ್ತವಲ್ಲ ಎಂಬ ರಾಜ್ಯ ಸರ್ಕಾರದ ಕೋರಿಕೆಗೆ ಮುಸ್ಲಿಂ ಸಮುದಾಯದ ಬೆಂಬಲ ಸಿಕ್ಕಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಜತೆ ನಡೆದ ಸಭೆಯಲ್ಲಿ ಈಗಾಗಲೇ ಪ್ರಾರ್ಥನೆ ನಡೆಸದಿರುವ ಕುರಿತು ನಿರ್ಧಾರ ಕೈಗೊಂಡಿರುವುದಾಗಿ ಮುಸ್ಲಿಂ ಧರ್ಮಗುರುಗಳು ಸ್ಪಷ್ಟಪಡಿಸಿದರು.
ಕರೊನಾ ಲಾಕ್ಡೌನ್: ಪೊಲೀಸ್ ಸಿಬ್ಬಂದಿಯ ಕಣ್ಣಲ್ಲಿ ನೀರು ಹಾಕಿಸಿದ ಸಾರ್ವಜನಿಕರು…!