ಉಡುಪಿ: ಲಾಕ್ಡೌನ್ ಆಗಿದ್ದೇ ಆಗಿದ್ದು ಹಲವು ಜನರು ಭಯಗೊಂಡಿದ್ದಾರೆ. ನಿತ್ಯ ಬಳಕೆ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಒಂದಲ್ಲ ಒಂದು ಅಂಗಡಿಯ ಎದುರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ.
ಪೊಲೀಸರಿಗಂತೂ ಅವರಲ್ಲಿ ಅರಿವು ಮೂಡಿಸಿ, ಚದುರಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಹೀಗೆ ರಸ್ತೆಗೆ ಇಳಿಯುವರ ಮೇಲೆ ಕೆಲವು ಕಡೆ ಪೊಲೀಸ್ ಸಿಬ್ಬಂದಿ ಮುಲಾಜಿಲ್ಲದೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಇನ್ನೊಂದಿಷ್ಟು ಪೊಲೀಸರು ಕೈ ಮುಗಿದು ಮನೆಯೊಳಗೆ ಹೋಗಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ಬೆಳ್ಮಣ್ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೋರ್ವ ಕಣ್ಣಲ್ಲಿ ನೀರು ಹಾಕಿದ್ದಾರೆ. ಅಂಗಡಿಮುಂಗಟ್ಟುಗಳ ಎದುರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಾದಾಗ ಅವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ.
ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದ ಜನರ ಬಳಿ ಈ ಪೊಲೀಸ್ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಒಂದೆಡೆ ಸೇರಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಇದರಿಂದ ಹತಾಶರಾದ ಪೊಲೀಸ್ ಒಬ್ಬರೇ ನಿಂತು ಕಣ್ಣಲ್ಲಿ ನೀರು ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)