ಬೆಂಗಳೂರು: ನಗರದ ಜನತೆಯ ಹಿತದೃಷ್ಟಿಯಿಂದ ಹಗಲು ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ಗೆ ಹಣ ಕೊಟ್ಟು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸರ್ಕಾರ ಸೂಚನೆ ಹೊರಡಿಸಿದೆ. ತನ್ಮೂಲಕ ರಾಜ್ಯ ಸರ್ಕಾರ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.
ಸರ್ಕಾರಿ ಪ್ರಯೋಗಾಲಯಗಳಿಂದ ಕೋವಿಡ್ ವರದಿ ಬರುವುದು ತಡವಾಗುತ್ತಿರುವ ಕಾರಣ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡುವಂತೆ ಸರ್ಕಾರ ಕರೊನಾ ವಾರಿಯರ್ಸ್ಗೆ ಸೂಚಿಸಿದೆ. ಇದರಿಂದಾಗಿ ಅವರೆಲ್ಲರೂ 1,500 ರೂಪಾಯಿ ಪಾವತಿಸಿ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಮಗ ಶರಣಾಗದಿದ್ದರೆ ಕೊಂದು ಬಿಡಿ ಎಂದಿದ್ದ ದುಬೆ ತಾಯಿ ಈಗ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದೇಕೆ?
ಈಶಾನ್ಯ ಮತ್ತು ಉತ್ತರ ಠಾಣೆಳಿಗೆ ಸೂಚನೆ ರವಾನೆ: ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಕರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಹಲವು ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಕೆಲದಿನಗಳ ಹಿಂದೆ ಪೊಲೀಸ್ ಆಯುಕ್ತರ ಕಚೇರಿಯನ್ನೂ ಸೀಲ್ಡೌನ್ ಮಾಡಲಾಗಿತ್ತು.
ಹೀಗಿದ್ದೂ, ಹಣ ಕೊಟ್ಟ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಬೆಂಗಳೂರು ನಗರದ ಈಶಾನ್ಯ ಮತ್ತು ಉತ್ತರ ವಿಭಾಗದ ಎಲ್ಲ ಠಾಣೆಗಳಲ್ಲೂ ನೋಟಿಸ್ ಅಂಟಿಸಲಾಗಿದೆ. ಹೀಗಾಗಿ ತಮ್ಮ ಕುಟುಂಬದವರ ಹಿತದೃಷ್ಟಿಯಿಂದ ಕೋವಿಡ್ ಪರೀಕ್ಷೆಗೆ ಒಳಪಡಲು ಬಯಸಿದರೂ ಹಣ ಕೊಡಬೇಕಾದ ಅನಿವಾರ್ಯತೆಯ ಬಗ್ಗೆ ಪೊಲೀಸ್ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ.