ಉಡುಪಿ/ಗಂಗೊಳ್ಳಿ: ಜಿಲ್ಲೆಯಲ್ಲಿ ಬುಧವಾರ 1179 ಮಂದಿಗೆ ಕರೊನಾ ವರದಿ ನೆಗೆಟಿವ್ ಬಂದಿದೆ. 263 ಮಂದಿಗೆ ಕರೊನಾ ಸೋಂಕು ಇರುವುದು ದೃಢಿಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6766ಕ್ಕೆ ಏರಿಕೆಯಾಗಿದೆ.
263 ಮಂದಿಯಲ್ಲಿ ಉಡುಪಿ 142, ಕುಂದಾಪುರ 95, ಕಾರ್ಕಳದ 23 ಮಂದಿ, ಹೊರ ಜಿಲ್ಲೆಯ ಮೂವರು ಸೋಂಕು ಬಾಧಿತರು. ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ 81 ವರ್ಷದ ವ್ಯಕ್ತಿ, ಉಡುಪಿ 66 ವರ್ಷದ ವ್ಯಕ್ತಿ ಮತ್ತು 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಒಟ್ಟು ಮೃತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಹೋಂ ಮತ್ತು ಆಸ್ಪತ್ರೆ ಐಸೋಲೇಶನ್ನಿಂದ 198 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 3966 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಕೋವಿಡ್-19 ರ್ಯಾಂಡಮ್ ಪರೀಕ್ಷೆ ವ್ಯವಸ್ಥೆ ಚುರುಕುಗೊಂಡಿದ್ದು, ಬುಧವಾರ 1577 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 1610 ಮಂದಿಯ ವರದಿ ಬರಲು ಬಾಕಿ ಇದೆ. 2738 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಗಂಗೊಳ್ಳಿ ನಿವಾಸಿ ಸಾವು: ಕರೊನಾ ಸೋಂಕಿತ ಗಂಗೊಳ್ಳಿ ಗ್ರಾಮದ ವ್ಯಕ್ತಿಯೋರ್ವರು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಂಗೊಳ್ಳಿ ಗ್ರಾಮದ ಮೀನು ಮಾರುಕಟ್ಟೆ ಸಮೀಪದ 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ 15 ದಿನ ಹಿಂದೆ ಪಾಸಿಟಿವ್ ಬಂದಿತ್ತು. ಗಂಗೊಳ್ಳಿ ಮಸೀದಿ ವಠಾರದಲ್ಲಿ ಮೃತದೇಹ ದಫನ ಮಾಡಲಾಯಿತು.
ಪೌರಾಯುಕ್ತರಿಗೆ ಪಾಸಿಟಿವ್: ಉಡುಪಿ ನಗರಸಭೆ ಪೌರಾಯುಕ್ತರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಯನ್ನು ಮತ್ತೆ 72 ಗಂಟೆ ಕಾಲ ಸೀಲ್ಡೌನ್ ಮಾಡಲಾಗಿದೆ. ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಇರುವುದಿಲ್ಲ ಎಂದು ನಗರಸಭೆ ಮೂಲಗಳು ದೃಢಪಡಿಸಿವೆ. ಈ ಹಿಂದೆ ಇಲ್ಲಿನ ಆರೋಗ್ಯ ನಿರೀಕ್ಷಕರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿತ್ತು. ಪೌರಯುಕ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಭೆಯಲ್ಲಿ ಭಾಗವಹಿಸಿದ್ದರು.