ಬೆಳಗಾವಿ: ಕರೊನಾ ಸೋಂಕಿತನೋರ್ವ ಐಸಿಯುನಲ್ಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರೆಲ್ಲ ಸೇರಿ ಆಂಬುಲೆನ್ಸ್ಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಮ್ಸ್ ಆಸ್ಪತ್ರೆಯ ಕೊವಿಡ್ ವಾರ್ಡ್ ಬಳಿ ಘಟನೆ ನಡೆದಿದೆ.
ಕರೊನಾ ಸೋಂಕಿತನನ್ನು ಅಥಣಿಯಿಂದ ಆಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ನಂತರ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಅಲ್ಲೇ ಮೃತಪಟ್ಟಿದ್ದಾರೆ.
ಸೋಂಕಿತನ ಸಾವಿನ ಸುದ್ದಿ ಕೇಳುತ್ತಲೇ ಅವರ ಸಂಬಂಧಿಕರು ಆಸ್ಪತ್ರೆ ಎದುರು ಗಲಾಟೆ ಶುರು ಮಾಡಿದ್ದಾರೆ. ಅದನ್ನು ನೋಡಿದ ಆಂಬುಲೆನ್ಸ್ ಚಾಲಕ ಮತ್ತು ನರ್ಸ್ಗಳು ಆಸ್ಪತ್ರೆಯೊಳಗೆ ಓಡಿ ಹೋಗಿದ್ದಾರೆ. ಉದ್ರಿಕ್ತ ಗುಂಪು ಐಸಿಯುನಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡಲೂ ಯತ್ನಿಸಿದೆ. ಇದನ್ನೂ ಓದಿ: ಕೊವಿಡ್-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ
ಪೊಲೀಸ್ ವಾಹನ, ಸ್ಥಳದಲ್ಲಿದ್ದ ಕಾರುಗಳ ಗಾಜನ್ನೂ ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ವಾರ್ಡ್ಗಳಿಗೂ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಆಂಬುಲೆನ್ಸ್ಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಪೊಲೀಸರೇ ನಂದಿಸಿದ್ದು, ಗುಂಪನ್ನು ಚದುರಿಸಿದ್ದಾರೆ. ಸ್ಥಳಕ್ಕೆ ಡಿಸಿ ಎಂ. ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ್ ನಿಂಬರಗಿ, ಪೊಲೀಸ್ ಕಮಿಷನರ್ ತ್ಯಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಒ ರಾಜೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್)
VIDEO| ಅಮಾವಾಸ್ಯೆ ದಿನದಂದೇ ಹೂತಿದ್ದ ಶವವನ್ನು ಹೊತ್ತೊಯ್ದ ದುಷ್ಕರ್ಮಿಗಳು!