ಬೆಳಗಾವಿ: ಕರೊನಾ ನಿಯಂತ್ರಣಕ್ಕೆ ನಗರದಲ್ಲಿ ಶ್ರಮಿಸುತ್ತಿರುವ 1,200 ಪೊಲೀಸ್ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಹಾಗೂ ಬಿಸ್ಕತ್ ವಿತರಿಸುವ ಮೂಲಕ ಕೆನರಾ ಬ್ಯಾಂಕ್ ಮಾನವೀಯತೆ ಮೆರೆದಿದೆ.
ನಗರದ ರಾಣಿ ಚನ್ನಮ್ಮ ವೃತ್ತ, ಗೋಗಟೆ ಸರ್ಕಲ್, ಬೋಗಾರವೇಸ್, ಗೋವಾವೇಸ್ ಸೇರಿ ವಿವಿಧ ಬಡಾವಣೆ ಮತ್ತು ವೃತ್ತಗಳಲ್ಲಿರುವ ಪೊಲೀಸ್ ಸಿಬ್ಬಂದಿಗೆ ಬ್ಯಾಂಕ್ನಿಂದ ಮಂಗಳವಾರ ಆಹಾರ ಪದಾರ್ಥ ವಿತರಿಸಲಾಯಿತು.
ಕೆನರಾ ಬ್ಯಾಂಕ್ ಪ್ರಾಂತೀಯ ಕಚೇರಿ ಸಹಾಯಕ ಮಹಾಪ್ರಬಂಧಕ ಕೆ.ಎನ್.ಕುಲಕರ್ಣಿ ಮಾತನಾಡಿ, ಇಡೀ ದೇಶವೇ ಲಾಕ್ಡೌನ್ ಸ್ಥಿತಿಯಲ್ಲಿರುವಾಗ ಪೊಲೀಸರು ವೈಯಕ್ತಿಕ ಆರೋಗ್ಯದ ಕಾಳಜಿ ಬದಿಗೊತ್ತಿ, ದೇಶದ ಜನತೆಯ ಆರೋಗ್ಯ ಕಾಪಾಡುವುದರಲ್ಲಿ ತೊಡಗಿದ್ದಾರೆ. ಗಡಿಯಲ್ಲಿ ಯೋಧರ ಕಾರ್ಯದಂತೆ ದೇಶದ ಒಳಗೆ ಜನತೆಯ ರಕ್ಷಣೆ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪೊಲೀಸರು ನಿಭಾಯಿಸುತ್ತಿದ್ದಾರೆ.
ಅವರ ಸೇವೆ ಸ್ಮರಣೀಯ ಎಂದರು. ದೇಶದ ಅತ್ಯಂತ ಹಳೆಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಸುನಾಮಿ, ಭೂಕಂಪ, ನೆರೆ, ಪ್ರವಾಹ, ಚಂಡಮಾರುತ ಮತ್ತಿತರ ಸಂದರ್ಭಗಳಲ್ಲಿ ಜನತೆಗೆ ಸಹಾಯಹಸ್ತ ನೀಡುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರು. ಕೆನರಾ ಬ್ಯಾಂಕ್ ಪ್ರಾಂತೀಯ ಕಚೇರಿಯ ಉಪಪ್ರಬಂಧಕ ಸಂಗಮೇಶ ಪಡ್ನಾಡ್, ಹಿರಿಯ ಪ್ರಬಂಧಕ ಅಮಿತ ಕೆ., ಹಿರಿಯ ಪ್ರಬಂಧಕ ಶ್ರೀಕಾಂತ ನಿರ್ವಾಣ, ಡಿಸಿಪಿ ಯಶೋಧಾ ಒಂಟಗೋಡಿ ಸೇರಿ ವಿವಿಧ ಅಧಿಕಾರಿಗಳು ಇದ್ದರು