ದೇವದುರ್ಗ: ಕರೊನಾ ಸೋಂಕು ದೇಶದ ಎಲ್ಲೆಡೆ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರೋಗ ನಿಯಂತ್ರಣಕ್ಕೆ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಬನದೇಶ್ವರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ನಡೆಸಿ ಶುಕ್ರವಾರ ಮಾತನಾಡಿದರು. ಬೇರೆ ಪ್ರದೇಶ, ಬೇರೆ ದೇಶದಿಂದ ವಾಪಸ್ ಬರುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಇತ್ತೀಚೆಗೆ ದಾಖಲಾದ ರೋಗಿಗಳ ಮಾಹಿತಿ ನೀಡಲೇಬೇಕು ಎಂದರು.
ಕರೊನಾ ತಡೆಗೆ ಮುಂಜಾಗ್ರತೆ ಕ್ರಮಗಳು ಅಗತ್ಯವಾಗಿವೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸುರಕ್ಷತೆ ಅನುಸರಿಸಬೇಕು. ತಾಲೂಕಿನಲ್ಲಿ ಯಾವುದೇ ವ್ಯಕ್ತಿ ಚಿಕಿತ್ಸೆ ಬಂದರೆ ಅವರ ಬಗ್ಗೆ ಸಮಗ್ರ ಮಾಹಿತಿ ಪಡೆಯಬೇಕು. ಕರೊನ ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ಅವರಿಗೆ 14 ದಿನಗಳ ನಿಗಾವಹಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು. ಅಂಥ ವ್ಯಕ್ತಿಗಳು ಕಂಡುಬಂದರೆ ಅವರನ್ನು ರಿಮ್ಸ್ಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು. ವೈದ್ಯಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಚ್.ಎ.ನಾಡಗೌಡ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ವೈದ್ಯರಾದ ಬಸವರಾಜ, ನಾಗರಾಜ, ನರೇಂದ್ರ ಪಾಟೀಲ್, ಡಾ.ಗಿರೀಜಾ ಗಿರೀಶ ಇದ್ದರು.