ಗೋಕಾಕ: ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ, ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಿದ್ದು, ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿ ನಿಂತಿದ್ದಾರೆ ಎಂದು ಬಿಇಒ ಜಿ.ಬಿ.ಬಳಗಾರ ಹೇಳಿದರು.
ನಗರದ ಲಕ್ಷ್ಮೀ ಸಭಾಂಗಣದಲ್ಲಿ ಜಿಪಂ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಚಿಕ್ಕೋಡಿ, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ (ಎಂಡಿಎಂ) ಹಾಗೂ ತಾಪಂ ಸಂಯುಕ್ತಾಶ್ರಯದಲ್ಲಿ ಗೋಕಾಕ ವಲಯದ ಅಡುಗೆ ಸಿಬ್ಬಂದಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳು ಸಮರ್ಥ ನಾಯಕರಾಗಿ ಬೆಳೆಯುವ ಸದುದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್ ಉದ್ಘಾಟಿಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳಿಂದ ಸಿಲಿಂಡರ್ಗೆ ಬೆಂಕಿ ತಗುಲಿದಾಗ ನಂದಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಜಿಪಂ ಮಾಜಿ ಸದಸ್ಯ ಮಡೆಪ್ಪ ತೋಳಿನವರ, ಮಾಜಿ ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಸಿಯೂಟ ಅಧಿಕಾರಿ ಎ.ಬಿ.ಮಲ್ಲಬನ್ನವರ, ಎಂ.ಡಿ.ಚುನಮರಿ, ಬಸವರಾಜ ಮುರಗೋಡ, ಎಂ.ವಿ.ಬಾಗೇನ್ನವರ, ಜಿ.ಆರ್.ಸನದಿ, ಅಗ್ನಿಶಾಮಕ ದಳದ ಠಾಣಾಧಿಕಾರಿ ಎಸ್.ಎನ್.ಮೆಳವಂಕಿ, ಎಸ್.ಎಂ.ಲೋಕನ್ನವರ, ಮಂಜುನಾಥ ಕಡೋಳಿ, ಸಂಜು ನಾಯಕ, ಎಂ.ಎಲ್.ಹಸರಂಗಿ, ಎಸ್.ಎಸ್.ಮಳಗಿ, ಎಸ್.ಎಸ್.ಮಾಳಗಿ ಇತರರು ಇದ್ದರು.