ರಾಯಚೂರು: ಕೇಂದ್ರ ಸರ್ಕಾರದ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್ಯುಸಿಐನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಭಾವತಿಗೆ ಮನವಿ ಸಲ್ಲಿಸಿ, ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯುಂಟು ಮಾಡುವ ಅಡುಗೆ ಅನಿಲ ದರವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ, ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಮಾಡಿರುವ ಬೆನ್ನ ಹಿಂದೆಯೇ ಅಡುಗೆ ಅನಿಲ ದರವನ್ನು 150 ರೂ.ಗೆ ಹೆಚ್ಚಿಸಿದ್ದು, ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯುಂಟು ಮಾಡಿದೆ.
ಎರಡು ವರ್ಷದಿಂದ ಸತತ ಪ್ರವಾಹದಿಂದ ನಷ್ಟಕ್ಕೆ ಒಳಗಾಗಿರುವ ಜನರು ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರು ಕಂಗಾಲಾಗುವಂತಾಗಿದೆ. ಕೂಡಲೇ ಬೆಲೆ ಏರಿಕೆ ನೀತಿ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಂಘಟನೆ ಪದಾಧಿಕಾರಿಗಳಾದ ಎನ್.ಎಸ್.ವೀರೇಶ, ಚನ್ನಬಸವ ಜಾನೇಕಲ್, ಸಿ.ಮಹೇಶ್, ರಾಮಣ್ಣ, ಪ್ರಮೋದಕುಮಾರ್, ಮಲ್ಲನಗೌಡ, ರೇಖಾ ಹಾಗೂ ಇತರರಿದ್ದರು.