ಕಾಗವಾಡ: ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಮಾತ್ರ ಬ್ಯಾಂಕ್ಗಳು ಅಭಿವೃದ್ಧಿ ಸಾಧ್ಯ ಎಂದು ಉಗಾರಖುರ್ದ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.
ಸಮೀಪದ ಉಗಾರ ಖುರ್ದ ಪಟ್ಟಣದಲ್ಲಿ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಮಾಂಜರಿಯ 28ನೇ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬ್ಯಾಂಕ್ನಿಂದ ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್ನ ಅಭಿವೃದ್ಧಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಮೋಹನರಾವ ಮಾತನಾಡಿ, ಸಹಕಾರಿ ಸಂಸ್ಥೆಗಳನ್ನ ಸ್ಥಾಪಿಸುವುದು ಸುಲಭ. ಅವುಗಳನ್ನು ನಡೆಸಿಕೊಂಡು ಹೋಗುವುದು ಹಾಗೂ ಮಾದರಿ ಸಂಸ್ಥೆಗಳನ್ನಾಗಿ ಬೆಳೆಸು ವುದು ಅತ್ಯಂತ ಕಠಿಣವಾದ ಕೆಲಸವಾಗಿದೆ. ಈ ಭಾಗದ ಮಾದರಿ ಸಂಸ್ಥೆಗಳಲ್ಲಿ ಶ್ರೀ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಒಂದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಮಾತನಾಡಿ, ಸಿಬ್ಬಂದಿ ನಿಸ್ವಾರ್ಥ ಸೇವೆ ಹಾಗೂ ಪರಿಶ್ರಮದ ಫಲವಾಗಿ ನಮ್ಮ ಸಂಸ್ಥೆಯು ದಿನದಿಂದ ದಿನಕ್ಕೆ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗುತ್ತಾ ಮಾದರಿ ಸಂಸ್ಥೆಯಾಗಿ ಮಾರ್ಪಡುತ್ತಿದೆ. ರೈತರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರ ಅಭಿವೃದ್ಧಿಯೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದರು. ಉಗಾರ ಶುಗರ್ಸ್ ಎಂ.ಡಿ. ಚಂದನ ಶಿರಗಾವಕರ, ಸಿದ್ಧಗೌಡ ಕಾಗೆ, ಕಲ್ಲಪ್ಪಣ್ಣ ಮಗೆಣ್ಣವರ, ಚಂದನ ಶಿರಗಾವಕರ, ವಸಂತ ಖೋತ, ಜಿನ್ನಪ್ಪ ಶೇಡಬಾಳೆ, ಜಿತೇಂದ್ರ ಸಾಂಗಲಿ, ಪ್ರಪುಲ ಥೋರುಸೆ, ಭರತಕುಮಾರ ನಾಂದಣಿ, ಸಂತೋಷ ಮಾಳಿ, ಬಾಳಾಸಾಹೇಬ ಥೋರುಸೆ, ಅಪ್ಪಾಸಾಬ ಕುಂಬಾರ, ಶಿವನಗೌಡ ಪಾಟೀಲ, ಸುರೇಶ ವಾಘಮೋಡೆ, ಝಾಕೀರ ಘಾಲವಾಡೆ, ಆಶೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.