More

    ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವುದು ಮುಖ್ಯ

    ಗದಗ: ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವುದೇ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬಸವರಾಜ ಹೇಳಿದರು.

    ನಗರದ ಜಿಲ್ಲಾಡಳಿತ ಬವನದ ಆಡಿಟೋರಿಯಂ ಹಾಲ್‍ದಲ್ಲಿ ಗುರುವಾರದಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ  ಇ ಕಾಮರ್ಸ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.    

    ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವ ಅಥವಾ ಸೇವೆಯನ್ನು  ಪಡೆಯುವ ವ್ಯಕ್ತಿಗಳು ಗ್ರಾಹಕರಾಗಿದ್ದಾರೆ.ಇತ್ತೀಚಿನ ಕೆಲವು ವರ್ಷಗಳಲ್ಲಿ ಜನಸಾಮಾನ್ಯರು  ಹೆಚ್ಚಾಗಿ ಇ-ಕಾಮರ್ಸ ಮತ್ತು  ಆನ್‍ಲೈನ್  ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದಾರೆ. ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ ಸಂಪೂರ್ಣ ಮಾಹಿತಿಯೊಂದಿಗೆ ವ್ಯವಹರಿಸಬೇಕಾಗುತ್ತದೆ.  ಖರೀದಿಗೂ ಮುನ್ನ ತೂಕ, ಅಳತೆ, ಗುಣಮಟ್ಟ, ಅವಧಿ ಎಲ್ಲವನ್ನೂ ಪರಿಶೀಲಿಸಿ ವಸ್ತುವನ್ನು ಖರೀದಿಸಬೇಕಾಗುತ್ತದೆ. ಮತ್ತು ಖರೀದಿಸಿದ ವಸ್ತುವಿನ ಬಿಲ್‍ನ್ನು ಪಡೆಯುವುದು ಮುಖ್ಯವಾಗಿದೆ. ಗ್ರಾಹಕರಿಗೆ ತಾವು ಖರೀದಿಸಿದ ವಸ್ತುವಿನ ಗುಣಮಟ್ಟದಲ್ಲಿ ದೋಷ ಕಂಡುಬಂದರೆ  ಅಥವಾ ಸೇವೆಯಲ್ಲಿ ನ್ಯೂನತೆ ಕಂಡು ಬಂದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ  ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಮಾತನಾಡಿ ಗ್ರಾಹಕರ ರಕ್ಷಣಾ ಕಾಯ್ದೆಯು 1986ರಲ್ಲಿ ಜಾರಿಗೆ ಬಂದಿತು. ಈ ಹಿಂದೆ ವಸ್ತುಗಳನ್ನು ನೇರವಾಗಿ ಹಣ ಕೊಟ್ಟು ಖರೀದಿಸುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆಯನ್ನು ಪಡೆಯುತ್ತಿದ್ದು ಹೊಸ ಸವಲತ್ತುಗಳೊಂದಿಗೆ ಹೊಸ ಸಮಸ್ಯೆಗಳು ಉದ್ಭವಿಸಿದವು. ತದನಂತರ ಕೆಲವು ಬದಲಾವಣೆಗಳೊಂದಿಗೆ  ಗ್ರಾಹಕರ ರಕ್ಷಣೆಗೆ 2019 ರಲ್ಲಿ ಹೊಸ  ಕಾಯ್ದೆ ಜಾರಿ ಮಾಡಲಾಯಿತು ಎಂದು ವಿವರಿಸಿದರು.

    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ರಾಜು ನಾಮದೇವ ಮೇತ್ರಿ ಅವರು ಮಾತನಾಡಿ ಗ್ರಾಹಕರು ಇ ಕಾಮರ್ಸ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ  ಕುರಿತು ಮಾಹಿತಿ  ನೀಡಿದರು.  

    ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಹಾಗೂ ನಿವೃತ್ತ ನ್ಯಾಯಾಧೀಶರಾದ ಎಸ್.ಜಿ. ಪಲ್ಲೇದ ಅವರು ಮಾತನಾಡಿ ಇ ಕಾಮರ್ಸ ಮತ್ತು ಡಿಜಿಟಲ್  ಟ್ರೇಡ್‍ನಲ್ಲಿ ಆನ್ ಲೈನ್ ಮುಖಾಂತರ ವಸ್ತುಗಳನ್ನು ಖರೀದಿಸುತ್ತೇವೆ. ಏನಾದರೂ ವಸ್ತುಗಳ ಗುಣಮಟ್ಟದಲ್ಲಿ ಕಳಪೆ ಎಂದು ಕಂಡುಬಂದಲ್ಲಿ ವಾಟ್ಸ್‍ಅಪ್ ಮುಖಾಂತರ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು.ಸಾರ್ವಜನಿಕರು ಬ್ಯಾಂಕ್‍ನ ಸೇವಾ ನ್ಯೂನ್ಯತೆಯಿಂದ ಮೋಸ ಹೋದಾಗ ಅಥವಾ ಶೋಷಣೆಗೊಳಗಾದ ಅಂತಹ ಸಂದರ್ಭದಲ್ಲಿ ಬ್ಯಾಂಕ್‍ಗೆ ನೀಡಿದ ಲಿಖಿತ ದೂರಿನ ದಾಖಲೆಗಳನ್ನು ಆಯೋಗಕ್ಕೆ ಹಾಜರುಪಡಿಸಿ ಪರಿಹಾರ ಕಂಡುಕೊಂಡಿರುವ ಕುರಿತು ಉದಾಹರಣೆ ಸಹಿತ ವಿವರಿಸಿದರು.

    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಶ್ರೀಮತಿ ಯಶೋಧಾ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಸ್ತುಗಳನ್ನು ಖರೀಸುವ ಹಾಗೂ ಸೇವೆಯನ್ನು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ಗ್ರಾಹಕರಿಗೆ ತಾವು ಖರೀದಿಸುವ ವಸ್ತುವಿನ ಬಳಕೆ ಕುರಿತು ತಿಳುವಳಿಕೆ ಇರಬೇಕು.  ಆನ್‍ಲೈನ್ ಮೂಲಕ ವ್ಯವಹರಿಸುವಾಗ ವಸ್ತುವಿನ ಸಂಪೂರ್ಣ ವಿವರ ಪಡೆಯುವುದು ಮುಖ್ಯವಾಗಿದೆ.    ಗ್ರಾಹಕರಿಗೆ ತಾವು ಖರೀದಿಸುವ ವಸ್ತುಗಳ ಕುರಿತು ಹೆಚ್ಚಿನ ತಿಳುವಳಿಕೆ ಹಾಗೂ ಗ್ರಾಹಕರ ಹಕ್ಕುಗಳ ಕುರಿತು ಅರಿವು ಇರಬೇಕು ಎಂದು ವಿವರಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರಾಚಪ್ಪ ತಾಳಿಕೋಟಿ ಅವರು  ಮಾತನಾಡಿ ಯಾವುದೇ ವಸ್ತುವನ್ನು ಖರೀದಿಸಿದಾಗ ರಸೀದಿ ಪಡೆಯುವುದು ಮುಖ್ಯವಾಗಿದೆ. ಒಂದು ವೇಳೆ ವಸ್ತುವು ಕಳಪೆ ಗುಣಮಟ್ಟದ್ದು ಎಂದು ಕಂಡು ಬಂದರೆ ಖರೀದಿಸಿದಾಗಿನ ಅಗತ್ಯ ದಾಖಲಾತಿಗಳನ್ನು ಒದಗಿಸಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ. ಹಿರೇಮನಿಪಾಟೀಲ, ಎಚ್.ಸಿ.ಇ.ಎಸ್.ಬಿಬಿಎ ಕಾಲೇಜು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಲ್ಲವಿ ಬಯ್ಯಾರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಬಿ. ಪೂಜಾರಿ, ಬಿಬಿಎ ಕಾಲೇಜು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘದವರು, ವಿವಿಧ ಇಲಾಖೆ ಅಧಿಕಾರಿಗಳು, ಆಹಾರ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

    ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಎಂ ಸರ್ವರಿಗೂ ಸ್ವಾಗತಿಸಿದರು. ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

    ಇದೇ ಸಂದರ್ಭದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಏರ್ಪಡಿಸಲಾದ ವಸ್ತುಪ್ರದರ್ಶನವನ್ನು  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರಾಚಪ್ಪ ಕೆ ತಾಳಿಕೋಟಿ ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts